ವಿಜಯಸಾಕ್ಷಿ ಸುದ್ದಿ, ಗದಗ : ಇಷ್ಟಲಿಂಗ ಪೂಜೆಯನ್ನು ಬಹಿರಂಗವಾಗಿ, ವೈಭವಯುತವಾಗಿ ಆಚರಿಸಿಕೊಂಡು ಬರುವಲ್ಲಿ ರಂಭಾಪುರಿ ಪೀಠದ ವೀರಗಂದಾಧರ ಜಗದ್ಗುರುಗಳು ಪ್ರಮುಖ ಕಾರಣೀಕರ್ತರು ಎಂದು ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜಗದ್ಗುರು ವಿಶ್ವಾರಾಧ್ಯ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗಿದ ಮಹಿಳೆಯರಿಗೆ ಉಡಿ ತುಂಬುವ ಹಾಗೂ `ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸರ್ವಾರಾಧ್ಯನಾಗಿರುವ ಶಿವನನ್ನು ದೇಹದ ಮೇಲಿರಿಸಿಕೊಂಡು, ಲಿಂಗದೊಂದಿಗೆ ಬದುಕಿ, ಲಿಂಗದಲ್ಲಿ ಲೀನವಾಗುವ ಭಾಗ್ಯ ಮನುಷ್ಯನಿಗೆ ಮಾತ್ರ ಲಭಿಸಿದೆ. ಪ್ರತಿಯೊಬ್ಬರೂ ಪೂಜೆ ಮಾಡುವಾಗ ಎಷ್ಟು ಭಾವದೊಳಗೆ ಬೆರೆಯುತ್ತೇವೆ ಅಷ್ಟು ಪುಣ್ಯ ಸಿಗುತ್ತದೆ ಎಂದರು.
ಕಾಶೀ ಪೀಠ ಗದಗ ಮಹಾನಗರಕ್ಕೆ 25 ವರ್ಷಗಳ ಹಿಂದೆ ಆಗಮಿಸಿದಾಗ 21 ದಿನಗಳ ಕಾಲ ಆಷಾಢ ಮಾಸದಲ್ಲಿ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮ ಮಾಡಿದ್ದೆವು. ಪ್ರಸಕ್ತ ವರ್ಷ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ನಡೆಸಿದ್ದಾರೆ ಎಂದು ಹೇಳಿದರು.
ಕಾಶೀ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಅನೇಕ ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ಸಿಕ್ಕಿದೆ. ಗುರುವಿನ ಸಾನ್ನಿಧ್ಯದಲ್ಲಿ ದೇಹವನ್ನು ದಂಡಿಸುವ ಮೂಲಕ ನಮ್ಮ ಪೂರ್ಣಾಂಗಗಳು ಶರಣಾಗತಿ ಹೊಂದಿದಾಗ ಗುರುವಿನ ಕೃಪಾಕಟಾಕ್ಷ ಒಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹುಬ್ಬಳ್ಳಿಯ ನವನಗರದ ಕಾಶೀ ಖಾಸಾ ಶಾಖಾ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನನ್ನು ಭವಬಂಧನದಿಂದ ದೂರ ಮಾಡುವವನೇ ಸದ್ಗುರು. ಮಾನವ ಲೌಖಿಕ ಜೀವನದಲ್ಲಿ ಎಷ್ಟೇ ಅನುಭವ ಹೊಂದಿದ್ದರೂ ಶಾಸ್ತ್ರದ ಅಧ್ಯಯನ ಅವಶ್ಯವಿದೆ ಎಂದು ಹೇಳಿದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕ್ಕಿರೇಶ್ವರ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಂಘದ ಕಾರ್ಯಾಧ್ಯಕ್ಷ ಸಿದ್ದಲಿಂಗಪ್ಪ ಚಳಗೇರಿ, ಕಳಕನಗೌಡ ಪಾಟೀಲ, ಪ್ರಸನ್ನ ಶಾಬಾದಿಮಠ, ಆರ್.ಎ. ರಬ್ಬನಗೌಡರ, ಚಂದ್ರು ಬಾಳಿಹಳ್ಳಿಮಠ, ಸುರೇಶ ಅಬ್ಬಿಗೇರಿ, ಉಮಾಪತಿ ಭೂಸನೂರಮಠ, ಎಸ್.ಎಸ್. ಮೇಟಿ, ವೀರಭದ್ರಯ್ಯ ಧನ್ನೂರಹಿರೇಮಠ, ಆರ್.ಕೆ. ಮಠ, ಡಾ. ಶೇಖರ ಸಜ್ಜನರ ಸೇರಿ ಹಲವರು ಇದ್ದರು.
ಅಕ್ಕಮ್ಮ ಗುರುಸ್ವಾಮಿಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ ನಿರೂಪಿಸಿದರು.
ತಮಿಳುನಾಡಿನಲ್ಲಿ 40ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯತ ಸಮಾಜದವರಿದ್ದು, ಇಷ್ಟಲಿಂಗ ಪೂಜೆ ಮಾಡುವ ಮೂಲಕ ಲಿಂಗದೀಕ್ಷೆ ನೀಡಲಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟç, ಕೇರಳ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿಯೂ ವೀರಶೈವ ಲಿಂಗಾಯತ ಸಮುದಾಯದವರನ್ನು ಒಟ್ಟುಗೂಡಿಸುವ ಪ್ರಯತ್ನ ಕಾಶೀ ಪೀಠದಿಂದ ನೆರವೇರಿಸಲಾಗುತ್ತಿದೆ ಎಂದು ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಧಾರವಾಡದ ಸರ್ಜನ್ ಡಾ. ಶಿವನಗೌಡ ರುದ್ರಗೌಡ ರಾಮನಗೌಡರ ಅವರಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ಕೃಪಾಪೋಷಿತ ‘ಧರ್ಮಪ್ರಕಾಶ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ಪುರಸ್ಕೃತ ಸಂಗೀತ ಶಿಕ್ಷಕ ನಾಗಪ್ಪ ಆರ್. ಶಿರೋಳ ಅವರಿಗೆ ದಿವ್ಯಾಂಗ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ರಾಜು ಗುಡಿಮನಿ ಅವರನ್ನು ಸನ್ಮಾನಿಸಲಾಯಿತು.