ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕು ದೊರೆಯಬೇಕು ಎಂಬ ಉದ್ದೇಶದಿಂದ ಬೆಟಗೇರಿಯಲ್ಲಿ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಕರೆ ನೀಡಿದರು.
ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.2ರ ಶಿಕ್ಷಕರು ಮತ್ತು ಸಮುದಾಯದ ಸದಸ್ಯರೊಂದಿಗೆ ಕಬಾಡಿ ಓಣಿ, ಮಜ್ಜಗಿ ಓಣಿ ಹಾಗೂ ಕಲ್ಮಠ ಓಣಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ವಿಶೇಷ ದಾಖಲಾತಿ ಆಂದೋಲನ ನಡೆಸಿ ಅವರು ಮಾತನಾಡಿದರು.
ವಿಶೇಷ ದಾಖಲಾತಿ ಆಂದೋಲನವು ಕೇವಲ ಮಕ್ಕಳ ದಾಖಲಾತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಸಾಮಾಜಿಕ ಬದ್ಧತೆಯಾಗಿದೆ. ಸಮುದಾಯದ ಸಹಭಾಗಿತ್ವದಿಂದ ಮಾತ್ರ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗದಗ-ಬೆಟಗೇರಿ ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡ್ರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಹಾಗೂ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ವಾತಾವರಣವಿದ್ದು, ಪಾಲಕರು ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ಸಂಯೋಜಕ ಮುರಳಿ ಸೋಲಾಪುರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದ್ದು, ಪಾಲಕರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯೋಪಾಧ್ಯಾಯಿನಿ ಗೀತಾ ದೇವಂಗಮಠ ಮಾತನಾಡಿ, ದಾಖಲಾತಿ ಆಂದೋಲನದಿಂದ ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರಲ್ಲಿ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುವ ಮನೋಭಾವವೂ ಹೆಚ್ಚುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಎಸ್.ವಿ. ಕೇಸರಿ, ಪೋಷಕರಾದ ರಾಘವೇಂದ್ರ ಕಬಾಡಿ, ಲಕ್ಷ್ಮಣಸಿಂಗ್ ಗಿಡ್ಡಿಮನಿ, ಶ್ರದ್ಧಾ ಕಬಾಡಿ, ಪಾರ್ವತಿಬಾಯಿ ರಜಪೂತ, ಮುನಿರಾಬೇಗಂ ಹವಾಲ್ದಾರ್, ಬಿ.ಬಿ. ಜಾನ್ ಈಟಿ, ರೇಣುಕಾಬಾಯಿ ಮರಿಯಾಳ, ಮಂಜುನಾಥ ಹಾದಿಮನಿ, ಕಾಶೀನಾಥ ಅರವಟಗಿ, ಮಂಜಣ್ಣ ದಿಂಡಿ, ರಾಜು ಕಬಾಡಿ, ಅಶೋಕ ಬಿರಾದಾರ, ಆಕಾಶ ಅರವಟಗಿ, ರಾಜು ಶಿಂಧೆ, ಗಗನ ಕಬಾಡಿ ಹಾಗೂ ಹೇಮಂತ ರಜಪೂತ ಸೇರಿದಂತೆ ಹಲವರು ಭಾಗವಹಿಸಿದ್ದರು.
“ವಿಶೇಷ ದಾಖಲಾತಿ ಆಂದೋಲನವು ಕೇವಲ ದಾಖಲಾತಿ ಅಭಿಯಾನವಲ್ಲ; ಪ್ರತಿಯೊಂದು ಮಗುವಿನ ಶಿಕ್ಷಣದ ಹಕ್ಕು ಸಾಕಾರಗೊಳಿಸುವ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಸಮುದಾಯದ ಸಹಕಾರದಿಂದ ಮಾತ್ರ ‘ಯಾವ ಮಗು ಶಾಲೆಯಿಂದ ಹೊರಗುಳಿಯದ’ ಗುರಿ ಸಾಧಿಸಲು ಸಾಧ್ಯ.”
– ಕವಿತಾ ದಂಡಿನ



