ವಿಜಯಸಾಕ್ಷಿ ಸುದ್ದಿ, ಧಾರವಾಡ : ಮುಂಬಯಿ ಪ್ರಾಂತ್ಯದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿ ಭಾಷೆಯ ಪ್ರಾಬಲ್ಯ ಹೆಚ್ಚಾದ ಸಂದರ್ಭದಲ್ಲಿ ವೆಂಕಟರಾವ ಅವರು 1906ರಲ್ಲಿ `ವಾಗ್ಭೂಷಣ’ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ವಕೀಲ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. ಈ ಮೂಲಕ ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಕನ್ನಡ ಭಾಷೆ, ಸಾಹಿತ್ಯಕ್ಕಾಗಿ ಆಲೂರು ವೆಂಕಟರಾಯರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯಕ ಹೇಳಿದರು.
ಶುಕ್ರವಾರಬೆಳಿಗ್ಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಕರ್ನಾಟಕ 50ರ ಸಂಭ್ರಮಾಚರಣೆ ಮತ್ತು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಅವರ 144ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡಿದರು.
ವೆಂಕಟರಾವ ಕನ್ನಡಿಗರ ನಿರಭಿಮಾನದ ಬಗ್ಗೆ ಮರುಕಪಡುತ್ತಿದ್ದರು. ಉದ್ಯಮಶೀಲತೆ ಬೆಳೆಸುವ ಮೂಲಕ ಸ್ವಾವಲಂಬಿ ಬದುಕನ್ನು ಕನ್ನಡಿಗರು ಕಟ್ಟಿಕೊಳ್ಳಬೇಕು ಎಂಬ ವಿಚಾರವಾಗಿ ಪ್ರಾರಂಭದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದರು. ಆದರೆ ಬ್ರಿಟಿಷರ ಅಸಹಕಾರದಿಂದ ಯಶಸ್ಸು ಕಾಣಲಿಲ್ಲ. ರೈತರ ಅಭಿವೃದ್ಧಿಗಾಗಿ ರೈತ ಸಂಘಗಳನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಕವಿವಿ ವಿಶ್ರಾಂತ ಕುಲಪತಿ ಡಾ. ಪ್ರಮೋದ ಗಾಯಿ ಮಾತನಾಡಿ, ಕರ್ನಾಟಕ ಎಂಬ ಪದವನ್ನು ತಂದುಕೊಟ್ಟವರು ಆಲೂರು ವೆಂಕಟರಾವರು. ಇವರು ಬರೆದ ಪುಸ್ತಕ, ಸಾಹಿತ್ಯಗಳನ್ನು ಓದಿದರೆ ಇವರ ಸಂಪೂರ್ಣ ಜೀವನ ಚರಿತ್ರೆಯನ್ನು ತಿಳಿಯಬಹುದು ಎಂದು ಹೇಳಿದರು.
ಆಲೂರು ವೆಂಕಟರಾವ ಅವರು ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಪತ್ರಿಕಾ ರಂಗದಲ್ಲಿ ಭಾಷೆಯ ಬಳಕೆಯ ಕುರಿತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಸಂಪಾದಕ ಮನೋಜಗೌಡ ಪಾಟೀಲ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ದೀಪಕ ಆಲೂರು, ವೆಂಕಟೇಶ ದೇಸಾಯಿ, ಪಾರ್ವತಿ ಹಾಲಭಾವಿ ದಂಪತಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.