ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಲ್ಕತ್ತಾದ ಶ್ಯಾಡೋ ಲೈನ್ಸ್ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರರ ಚಿತ್ರ ಪ್ರಶಸ್ತಿ ಗಳಿಸಿದೆ.
ಸ್ಪರ್ಧೆಯ ಛಾಯಾಪತ್ರಿಕೋದ್ಯಮ ವಿಭಾಗದಲ್ಲಿ ಕಂದಕೂರರ `ಕುಡಿಯುವ ನೀರಿಗಾಗಿ…'(ಫಾರ್ ಡ್ರಿಂಕಿಂಗ್ ವಾಟರ್) ಶೀರ್ಷಿಕೆಯ ಚಿತ್ರ ಅರ್ಹತೆಯ ಪ್ರಮಾಣ ಪತ್ರ ಪಡೆದುಕೊಂಡಿದೆ. ಬೇಸಿಗೆ ಸಂದರ್ಭದಲ್ಲಿ ಸಮೀಪದ ಹಳ್ಳದಲ್ಲಿ ಗುಂಡಿ (ವರ್ತಿ) ತೋಡಿ, ಅದರಲ್ಲಿ ನೀರು ಸಂಗ್ರಹಿಸುವ ಬಗೆಯನ್ನು ಕಟ್ಟಿಕೊಡುವ ಈ ಬಹುಮಾನಿತ ಚಿತ್ರವನ್ನು ಜಿಲ್ಲೆಯ ಕವಲೂರಿನಲ್ಲಿ ಸೆರೆಹಿಡಿಯಲಾಗಿತ್ತು. ನಮ್ಮ ಭಾಗದ ಜನ ಕುಡಿಯುವ ನೀರಿಗಾಗಿ ಎದುರಿಸುವ ಸಮಸ್ಯೆಯನ್ನು ಸಮರ್ಥವಾಗಿ ಬಿಂಬಿಸುವಂತಿದೆ ಈ ಚಿತ್ರ.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕೆಂದುಘುಟು ಎಂಬ ಕುಗ್ರಾಮದ ಮಧುಕರಿ ಶಿಕ್ಷಾ ಪ್ರಾಂಗಣದಲ್ಲಿ ಶಿಕ್ಷಣ ಕಲಿಯುವ ಆದಿವಾಸಿ ಸಮುದಾಯದ ಬಾಲಕಿಯರಿಗೆ ಮೂಲ ಸೌಕರ್ಯ ಕಲ್ಪಿಸಲು ಸಹಾಯಧನ ಕ್ರೋಢಿಕಡಿರಿಸುವ ಉದ್ದೇಶದಿಂದ ಶ್ಯಾಡೋ ಲೈನ್ಸ್ ಸಂಸ್ಥೆ ಈ ಸ್ಪರ್ಧೆ ಆಯೋಜಿಸಿತ್ತು ಎಂಬುದು ವಿಶೇಷ.
ದೇಶದ ವಿವಿಧ ರಾಜ್ಯಗಳ 299 ಜನ ಛಾಯಾಗ್ರಾಹಕರ ಸುಮಾರು 6,463 ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಶ್ಯಾಮಲ್ ಕುಮಾರ್ ರಾಯ್, ತಪಸ್ ಬಸು, ಅಪರೇಶ್ ಸರ್ಕಾರ್, ಪ್ರಭಿರ್ ದಾಸ್, ಸುದೀಪ್ ದಾಸ್, ಸುಜಯ್ ಸಾಹಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
Trending Now



