ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ರೈತರ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಗೆ ಹಳದಿರೋಗ, ಹಸಿರುಕೀಟ, ಸೀರು, ಬೂದುರೋಗದ ಜೊತೆಗೆ ಇದೀಗ ಕೊಂಬಿನ ಹುಳು ಕೀಟಭಾದೆ ಆವರಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿದ್ದಾರೆ.
ಮುಂಗಾರಿನಲ್ಲಿ ಮೊದಲು ಕೈ ಸೇರುವ ಹೆಸರು ರೈತರ ಆಶಾದಾಯಕ ವಾಣಿಜ್ಯ ಬೆಳೆಯಾಗಿದೆ. ಲಕ್ಷ್ಮೇಶ್ವರ ಸೇರಿ ತಾಲೂಕಿನ ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ ಸೇರಿ 10 ಸಾವಿರ ಎಕರೆ ಜಮೀನಿನಲ್ಲಿ ಹೆಸರು ಬಿತ್ತನೆಯಾಗಿದೆ. ಕಡಿಮೆ ಅವಧಿ, ಖರ್ಚು-ವೆಚ್ಚ ಲೆಕ್ಕಾಹಾಕಿ ಮುಖ್ಯವಾಗಿ ಯಂತ್ರ ಕಟಾವಿಗೆ ಬರುವ ಎತ್ತರ ತಳಿಯ ದುಬಾರಿ ಬೀಜ ಬಿತ್ತನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಹೆಸರಿಗೆ 8682 ರೂ ಬೆಂಬಲ ಘೋಷಣೆ ಮಾಡಿದ್ದರಿಂದ ತಾಲೂಕಿನಲ್ಲಿ ಈ ವರ್ಷ ಗುರಿ ಮೀರಿ ಹೆಸರು ಬಿತ್ತನೆ ಮಾಡಿದ್ದಾರೆ. ಆದರೆ ಒಂದು/ಒಂದೂವರೆ ತಿಂಗಳ ಕಾಲಾವಧಿಯ ಹೆಸರು ಬೆಳೆಗೆ ಈಗ ಸರಣಿ ಕ್ರಮದಲ್ಲಿ ಕೀಟಬಾಧೆ ಆವಸಿರುವುದು ನೆಚ್ಚಿನ ಬೆಳೆ ಉಳಿಸಿಕೊಳ್ಳುವಲ್ಲಿ ರೈತರು ಹೈರಾಣಾಗಿದ್ದಾರೆ. ಇದು ರೈತರಿಗೆ `ಮೊದಲ ತುತ್ತಿಗೆ ಹಳ್ಳು’ ಎನ್ನುವ ಸ್ಥಿತಿಯಂತಾಗಿದೆ.

ಕಡಿಮೆ ಖರ್ಚು, ಅಲ್ಪಾವಧಿ, ಉತ್ತಮ ಬೆಲೆ ಸಿಗುತ್ತದೆ ಎಂದು ಕಳೆದ ವರ್ಷದ ಬರಗಾಲದ ನಡುವೆಯೂ ಹೊಸ ಭರವಸೆಯೊಂದಿಗೆ ಮತ್ತೆ ಸಾಲ ಮಾಡಿ ಹೆಚ್ಚು ಜಮೀನಿನಲ್ಲಿ ಹೆಸರು ಬಿತ್ತಿದ್ದೇವೆ. ಮಳೆಯ ಕೊರತೆಯ ನಡುವೆಯೂ ಈಗ ಹನಕಲು ಮಳೆಗೆ ಕೊಂಚ ಉತ್ತಮವಾಗಿಯೇ ಬೆಳೆದಿರುವ ಬೆಳೆಗೆ ಕೀಟಿಬಾಧೆ ತಪ್ಪುತ್ತಿಲ್ಲ. ಹೇಗಾದರೂ ಸರಿ ಬೆಳೆ ಉಳಿಸಿಕೊಳ್ಳಲು 15 ದಿನಕ್ಕೊಮ್ಮೆ ಸಾವಿರಾರು ರೂ ಖರ್ಚು ಮಾಡಿ ಕ್ರಿಮಿನಾಶಕ ಸಿಂಪಡಿಸಬೇಕಾಗಿದೆ. ಈಗಾಗಲೇ ಎಕರೆಗೆ 15/20 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಹೆಸರು ಬೆಳೆ ಕೈ ಸೇರುವವರೆಗೂ ಆತಂಕ ತಪ್ಪದಂತಾಗಿದೆ.
– ಮಂಜುನಾಥ ನರೇಗಲ್.
ರೈತರು.ಹೆಸರು ಬೆಳೆಗೆಗೆ ಅಲ್ಲಲ್ಲಿ ಕೊಂಬಿನಹುಳು ಬಾಧೆ ಆವರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಸಲಹೆ-ಸೂಚನೆ ನೀಡುತ್ತಿದ್ದೇವೆ. ಈ ಹುಳುಗಳು ಹಸಿರು ಬಣ್ಣದ ಮತ್ತು ದೇಹದ ಹಿಂಭಾಗಲ್ಲಿ ಚೂಪಾದ ಕೊಂಬನ್ನು ಹೊಂದಿರುತ್ತದೆ. ಎಲೆಗಳ ಕೆಳಗಿರುವ ಕೀಟವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಪ್ರಾರಂಭದ ಹಂತದಲ್ಲಿಯೇ ಗುರುತಿಸಬೇಕು. 16 ಲೀ ನೀರಿಗೆ 25 ಎಂಎಲ್ ಲ್ಯಾಂಬ್ಡಾ ಸೈಲೋಥ್ರೀನ್ ಸಿಂಪಡಿಸಬೇಕು. ಬೆಳೆಗಳ ವಿವರವನ್ನು ಬೆಳೆದರ್ಶಕ ಆ್ಯಪ್ನಲ್ಲಿ ದಾಖಲಿಸಬೇಕು.
– ಚಂದ್ರಶೇಖರ ನರಸಮ್ಮನವರ.
ಕೃಷಿ ಅಧಿಕಾರಿ.



