ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಪರಿಶಿಷ್ಟ ಅಭಿವೃದ್ಧಿ ಅಭ್ಯುದಯಕ್ಕೆ ಮೀಸಲಿಟ್ಟ ಅನುದಾನವನ್ನು ರಾಜ್ಯ ಸರ್ಕಾರವು ಗ್ಯಾರಂಟಿ ಮತ್ತು ಇತರ ಉದ್ದೇಶಗಳಿಗಾಗಿ ಬಳಸಿರುವ ಸರ್ಕಾರದ ನಡೆ ಖಂಡನಾರ್ಹ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನವಾಗಿ ಮಾಡಿದ ಕಾಯ್ದೆಯನ್ನು ಸರಕಾರ ದುರುಪಯೋಗಪಡಿಸಿದೆ. ಈ ಬಗೆಗಿನ ಸಮಗ್ರ ಮಾಹಿತಿಗಳನ್ನು ಮಾಧ್ಯಮಗಳು ಬಹಿರಂಗಪಡಿಸುತ್ತಿವೆ.
ಎಸ್ಎಸ್ಪಿ, ಟಿ.ಎಸ್ಪಿ 2014/15ರಿಂದ 2023/24ರವರೆಗಿನ ಅಂಕಿ ಅಂಶಗಳ ಪ್ರಕಾರ ನಿಗದಿಪಡಿಸಿದ ಅನುದಾನ 2.56 ಲಕ್ಷ ಕೋಟಿ ರೂಪಾಯಿ, ಬಿಡುಗಡೆಯಾದ ಅನುದಾನ 2.47 ಲಕ್ಷ ಕೋಟಿ, ವೆಚ್ಚವಾದ ಅನುದಾನ 2.41 ಲಕ್ಷ ಕೋಟಿ ರೂಪಾಯಿ (ಶೇ 94.22) ಆಗಿದೆ.
ಕಳೆದೆರಡು ವರ್ಷಗಳಿಂದ ಗ್ಯಾರಂಟಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನವನ್ನು ಬಳಸಲಾಗಿದೆ. ಪರಿಶಿಷ್ಟರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಆ ಸಮುದಾಯಕ್ಕೆ ತಲುಪುತ್ತಿಲ್ಲ ಎಂಬ ಆರೋಪವು ಕೇಳಿ ಬರುತ್ತಿದೆ. ಈ ರೀತಿಯಲ್ಲಿ ಸರ್ಕಾರ ಪರಿಶಿಷ್ಟರ ನಿಧಿಗೆ ಕನ್ನ ಹಾಕಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.