ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕಣ್ಣು ಮನುಷ್ಯನ ದೇಹದಲ್ಲಿರುವ ಪ್ರಮುಖ ಅಂಗವಾಗಿದ್ದು, ಇದರ ಬಗ್ಗೆ ಕಾಳಜಿ ವಹಿಸಿ ವೈದ್ಯರ ಸಲಹೆಯಂತೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮೃತ ಹರಿದಾಸ ಸಲಹೆ ನೀಡಿದರು.
ಇಲ್ಲಿಯ ಅನ್ನದಾನೀಶ್ವರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಉಚಿತ ನೇತ್ರ, ರಕ್ತದೊತ್ತಡ, ಮಧುಮೇಹ ಪರೀಕ್ಷೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೃದ್ಧಾಪ್ಯದಲ್ಲಿ ಆವರಿಸುವ ನೇತ್ರ ಸಮಸ್ಯೆ, ರಕ್ತದೊತ್ತಡ, ಮಧುಮೇಹ ರೋಗಗಳು 50ನೇ ವಯಸ್ಸಿನೊಳಗೇ ಕಾಡುತ್ತಿದ್ದು, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣದ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಗ್ರಾಮದಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನೇತ್ರ ತಪಾಸಣಾ ಅಧಿಕಾರಿ ಡಾ. ಶಿವಲಿಂಗಪ್ಪ ಕೊಡೆಕ್ಕಲ್ ನೇತ್ರ ರಕ್ಷಣೆ, ಕಣ್ಣಿನ ತಪಾಸಣೆ ಮಾಡಿದ ಬಳಿಕ ಇದರ ಚಿಕಿತ್ಸೆ, ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿಶಾಲ ಮಲಪೂರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಮ್ಸ್ ಆರೋಗ್ಯ ಸಿಬ್ಬಂದಿ ಬಿ.ಪಿ., ಶುಗರ್ ಪರೀಕ್ಷೆ ಮಾಡಿದರು. 9 ಜನರಿಗೆ ಕಣ್ಣಿನ ಪೊರೆ ಶಸ್ತç ಚಿಕಿತ್ಸೆಗೆ ಸಲಹೆ ನೀಡಿದರು. 85 ಫಲಾನುಭವಿಗಳು ಭಾಗವಹಿಸಿದ್ದರು. ಅನ್ನದಾನೀಶ್ವರ ಸೇವಾ ಸಮಿತಿಯ ಅಧ್ಯಕ್ಷ ಮಾರ್ಕಂಡಯ್ಯ ಗಡ್ಡದ ವೇದಿಕೆಯಲ್ಲಿದ್ದರು. ವಲಯ ಮೇಲ್ವಿಚಾರಕ ದಾದಾ ಕಾಲಂದಾರ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ ಜೈನ್ ನಿರೂಪಿಸಿದರು. ಗ್ರಾ.ಪಂ ಸದಸ್ಯೆ, ಸೇವಾ ಪ್ರತಿನಿಧಿ ರಜಿಯಾಬೇಗಂ ತಹಸೀಲ್ದಾರ ವಂದಿಸಿದರು.