ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶೈಕ್ಷಣಿಕ ಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ಹೆಚ್ಚಳ, ಇಲಾಖೆ ಕಾರ್ಯಕ್ರಮ ಸಮಾಲೋಚನೆ ಮತ್ತಿತರ ಮಹತ್ವದ ಉದ್ದೇಶ ಸಾಧನೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳ ಪಾತ್ರ ಮಹತ್ವದ್ದು. ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ನವೀಕೃತಗೊಂಡ ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ನ ಸಮೂಹ ಸಂಪನ್ಮೂಲ ಕೇಂದ್ರದ ನವೀಕೃತಗೊಂಡ ಕೇಂದ್ರ ಕಂಗೊಳಿಸುತ್ತಿದೆ. ಇದು ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು, ನಾವೀನ್ಯತೆ ಕಲಿಯುವ ಸ್ಥಳವಾಗಿದೆ.
ಲಕ್ಷ್ಮೇಶ್ವರ ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಸಂಪನ್ಮೂಲ ವ್ಯಕ್ತಿ ಸತೀಶ್ ಬೋಮಲೆ ಕ್ಲಸ್ಟರಿನ ಎಲ್ಲಾ ಶಿಕ್ಷಕರ ಸಹಕಾರದಿಂದ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ನೆರವಿನಿಂದಾಗಿ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ನಿವೃತ್ತ ಡಿಡಿಪಿಐ ಎಮ್.ಎ. ರಡ್ಡೇರ, ಬಿಇಓ ಎಚ್.ಎನ್. ನಾಯಕ, ಆರ್.ಎಸ್. ಬುರಡಿ, ವಿ.ವಿ. ಸಾಲಿಮಠ, ವಿ.ವಿ. ನಡುವಿನಮನಿ, ಮಂಗಳಾ ತಾಪಸ್ಕರ ಆಗಮಿಸಲಿದ್ದಾರೆ. ಉಪನ್ಯಾಸಕರಾದ ಎಚ್.ಬಿ. ರಡ್ಡೇರ, ಶಂಕರ ಹಡಗಲಿ, ಬಿ.ಎಸ್ ಭಜಂತ್ರಿ, ಎಚ್.ಎಸ್. ರಾಮನಗೌಡ್ರ, ಕರಾಸನೌ ಸಂಘ ಲಕ್ಷ್ಮೇಶ್ವರ ಘಟಕದ ಅಧ್ಯಕ್ಷ ಡಿ.ಎಚ್. ಪಾಟೀಲ, ಕರಾಪ್ರಾಶಾಶಿ ಸಂಘದ ಅಧ್ಯಕ್ಷ ಬಿ.ಎಸ್. ಹರಲಾಪುರ ಹಾಗೂ ಸದಸ್ಯರು, ಪುರಸಭೆ ಸದಸ್ಯರಾದ ರಾಜಣ್ಣ ಕುಂಬಿ, ಎಸ್ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಬಸಾಪೂರ, ಎಮ್.ಎಮ್. ಹವಳದ, ಈಶ್ವರ ಮೆಡ್ಲೇರಿ, ಬಿ.ಎಮ್. ಕುಂಬಾರ, ಸತೀಶ್ ಬೋಮಲೆ, ಉಮೇಶ್ ನೇಕಾರ, ಎನ್.ಎ. ಮುಲ್ಲಾ, ಬಿ.ಎಮ್. ಯರಗುಪ್ಪಿ ಹಾಗೂ ತಾಲೂಕಿನ ಎಲ್ಲ ಇಸಿಓ, ಬಿಆರ್ಪಿ, ಸಿಆರ್ಪಿ ಮತ್ತು ಎಲ್ಲಾ ಶೈಕ್ಷಣಿಕ ಸಂಘಗಳ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿರಲಿದ್ದಾರೆ.
ಈ ಕೇಂದ್ರವು ಸರ್ಕಾರದ ಸುತ್ತೋಲೆಗಳು, ಗ್ರಂಥಾಲಯ ಪುಸ್ತಕಗಳು, ಶಿಕ್ಷಕರ ಕೈಪಿಡಿ, ಮಕ್ಕಳ ಕೈಪಿಡಿ, ಸರ್ಕಾರದ ನಿಯಮಾವಳಿಗಳು, ಜ್ಞಾನವನ್ನು ಹೆಚ್ಚಿಸುವ ಆಟಗಳು, ಶಿಕ್ಷಕರ ತರಗತಿ ಪ್ರಕ್ರಿಯೆ ಸರಳಗೊಳಿಸುವ ಪುಸ್ತಕಗಳು, ಸುಸಜ್ಜಿತ ಟೇಬಲ್-ಕುರ್ಚಿ, ಸ್ಮಾರ್ಟ್ ಟಿವಿ/ಕ್ಲಾಸ್, ಟ್ರೆಜರಿ, ಕಂಪ್ಯೂಟರ್, ಪ್ರಿಂಟರ್, ಶಿಕ್ಷಕರ ಆನ್ಲೈನ್ ಸೇವೆಗಳ ಮಾಹಿತಿ, ಕ್ಲಸ್ಟರ್ ನಕ್ಷೆ, ಕ್ಲಸ್ಟರ್ನ ಎಲ್ಲಾ ಶಾಲೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.