ಸಮಾಜದ ಋಣ ತೀರಿಸುವ ಮನೋಭಾವ ಬೆಳೆಯಲಿ : ನಾಗರಾಜ ಅರಳಿ

0
``Shravan Samjam'' is a program of Sharan's values ​​based thoughts
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶ್ರವಣ ಎಂದರೆ ಕೇಳುವುದು ಎಂದರ್ಥ. ಪವಿತ್ರ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳನ್ನು ಶ್ರವಣ ಮಾಡುವ ಮೂಲಕ ಮನಸ್ಸಿನ ದುಃಖ-ದುಮ್ಮಾನಗಳು ಕಳೆದು ಮನಃಶಾಂತಿ, ನಿರ್ಮಲಶುದ್ಧ- ಪ್ರಸನ್ನಚಿತ್ತ ಮನಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗರಾಜ ಅರಳಿ ಅಭಿಪ್ರಾಯಪಟ್ಟರು.

Advertisement

ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಪೂಜ್ಯ ಸಿದ್ದೇಶ್ವರ ಸತ್ಸಂಗ ಬಳ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ, ರಾಜ-ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ತಾಲೂಕೂ ಶರಣ ಸಾಹಿತ್ಯ ಪರಿಷತ್ತು, ಪ್ರೇಮಕ್ಕ ಅಭಿಮಾನಿ ಬಳಗ ಅಕ್ಕಮಹಾದೇವಿ ಬಳಗ, ಇವುಗಳ ಸಹಯೋಗದಲ್ಲಿ ಶ್ರಾವಣಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತ ನಡೆಯಲಿರುವ `ಶ್ರಾವಣ ಸಂಜೆ’ ಶರಣರ ಮೌಲ್ಯಾಧಾರಿತ ಚಿಂತನೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಪೂರ್ಣ ಬದುಕಿಗೆ ಶರಣರ ವಚನಗಳು ಅಗತ್ಯವಾಗಿವೆ. ಸಮಾಜದ ಋಣ ತೀರಿಸುವ ಮನೋಭಾವನೆ ಎಲ್ಲರಲ್ಲಿ ಬೆಳೆದು ಬರಬೇಕಾಗಿದೆ. ನಾಗರಿಕರು ಭ್ರಷ್ಟರಾದರೆ ನಾಯಕರು ಭ್ರಷ್ಟರಾಗುತ್ತಾರೆ. ಸಾಮಾಜಿಕ ಬದಲಾವಣೆ, ಭ್ರಷ್ಟಾಚಾರ ನಿಗ್ರಹದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಕಾರ್ಯವನ್ನು ಮಾಡಿ ಉತ್ತಮ ಪ್ರಜೆಗಳನ್ನು ರೂಪಿಸಬೇಕು. ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳು ಮರೆಯುತ್ತಿರುವ ಈ ಸಂದರ್ಭದಲ್ಲಿ ಸುಮಾರು 18 ವರ್ಷಗಳಿಂದ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಇಂತಹ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವದು ಅವಶ್ಯವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ವಹಿಸಿದ್ದರು. ಶರಣರಲ್ಲಿ ಸಾಮಾಜಿಕ ಚಿಂತನೆ ಕುರಿತು ಎಸ್.ಎಫ್. ಆದಿ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಚಂದ್ರಣ್ಣ ಮಹಾಜನಶೆಟ್ಟರ, ಡಾ. ಪರಶುರಾಮ ಬಾರ್ಕಿ, ಡಾ. ಶಿವಾನಂದ ಹೂವಿನ, ಕದಳಿ ವೇದಿಕೆಯ ತಾಲೂಕಾಧ್ಯಕ್ಷೆ ನಿರ್ಮಲಾ ಅರಳಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್. ಅರಳಿಹಳ್ಳಿ ವೇದಿಕೆಯಲ್ಲಿದ್ದರು. ಈ ವೇಳೆ ಪೂರ್ಣಾಜಿ ಖರಾಟೆ, ಅಶೋಕ ಸೊರಟೂರ ಅವರನ್ನು ಸನ್ಮಾನಿಸಲಾಯಿತು. ರತ್ನಾ ಕರ್ಕಿ, ನಂದಿನಿ ಮಾಳವಾಡ ನಿರೂಪಿಸಿದರು.

ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೇಷ್ಠವಾದ ಶ್ರಾವಣ ಮಾಸದಲ್ಲಿ ಒಳ್ಳೆಯದನ್ನು ಕೇಳಿ ಅದನ್ನು ಮನನ ಮಾಡಿಕೊಂಡು ಜೀವನ ನಡೆಸುವದು ಅವಶ್ಯ. ಸಂತರ, ಶರಣರ, ಮಹಾತ್ಮರ ಚಿಂತನ-ಮಂಥನಗಳ ಸತ್ಸಂಗ ಕಾರ್ಯಕ್ರಮಗಳು ಜನರ ಮನಸ್ಸನ್ನು ಕಟ್ಟಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿವೆ. ಲಕ್ಷ್ಮೇಶ್ವರದಲ್ಲಿ ಒಂದು ತಿಂಗಳ ಪರ್ಯಂತ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಮಹಿಳೆಯ ಶಕ್ತಿಯ ಪ್ರತೀಕವಾಗಿ ದಿ. ಪ್ರೇಮಕ್ಕ ಬಿಂಕದಕಟ್ಟಿ ಕಾರ್ಯ ಮಾಡುತ್ತಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ಅವರ ಅಭಿಮಾನಿಗಳು, ಶಿಷ್ಯವೃಂದ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here