ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನಲ್ಲಿ ಪಹಣಿಗೆ ಆಧಾರ್ ಜೋಡಣೆಯಲ್ಲಿ ಶೇ.80.19ರಷ್ಟು ಪ್ರಗತಿ ಸಾಧಿಸಿದ ಲಕ್ಷ್ಮೇಶ್ವರ ತಾಲೂಕು ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಶುಕ್ರವಾರ ಗದಗ ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಪರೆನ್ಸ್ ಹಾಲ್ನಲ್ಲಿ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು.
ಪಹಣಿಗೆ ಆಧಾರ್ ಜೋಡಣೆಯಲ್ಲಿ ಶೇ.80ಕ್ಕೂ ಅಧಿಕ ಪ್ರಗತಿ ಸಾಧಿಸಿದ 4 ಕಂದಾಯ ನಿರೀಕ್ಷಕರಿಗೆ ಹಾಗೂ ಶೇ.90ಕ್ಕಿಂತ ಅಧಿಕ ಪ್ರಗತಿ ಸಾಧಿಸಿದ ಒಟ್ಟು 11 ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರವನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಪ್ರಶಂಸನಾ ಪತ್ರವನ್ನು ಸ್ವೀಕರಿಸಿದ ತರುವಾಯ ತಹಸೀಲ್ದಾರ ವಾಸುದೇವ ಸ್ವಾಮಿಯವರು ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪಹಣಿಗೆ ಆಧಾರ್ ಜೋಡಣೆ ಮಾಡುವ ಕಾರ್ಯವನ್ನು ಕಂದಾಯ ಸಚಿವರಾದ ಕೃಷ್ಣ ಬೈರೆಗೌಡರ ನಿರ್ದೇಶನದಂತೆ ನಮ್ಮ ಸಿಬ್ಬಂದಿಗಳು ಉತ್ತಮ ಕಾರ್ಯವನ್ನು ಮಾಡಿದ್ದು, ಪಹಣಿ ಮತ್ತು ಆಧಾರ್ ಜೋಡಣೆಯಾದರೆ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ದೊರೆಯುವ ಹಲವಾರು ಯೋಜನೆಗಳು ನೇರವಾಗಿ ತಲುಪಲಿವೆ.
ಇಲ್ಲಿಯವರೆಗೂ ಪಹಣಿ-ಆಧಾರ್ ಜೋಡಣೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತೆಲಂಗಾಣ ಮತ್ತು ಆಂದ್ರದಲ್ಲಿ ಮಾಡಿರುವಂತೆ ಪಹಣಿ-ಆಧಾರ್ ಜೋಡಣೆ ಮಾಡುವದರಿಂದ ಆಡಳಿತಾತ್ಮಕ ಸುಧಾರಣೆಗೆ ಅನೂಕೂಲವಾಗಲಿದೆ. ಕಂದಾಯ ಇಲಾಖೆ ಕಮೀಷನರ್ ಅವರ ನಿರ್ದೇಶನದಂತೆ ಕಾರ್ಯ ನಡೆದಿದ್ದು, ಗದಗ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವದಕ್ಕೆ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ದೊರಕಿದೆ. ಇದಕ್ಕೆ ಎಲ್ಲ ಸಿಬ್ಬಂದಿಗಳ ಉತ್ತಮ ಕಾರ್ಯದ ಶ್ರಮ ಕಾರಣವಾಗಿದೆ ಎಚಿದರು.
ಕಂದಾಯ ನ್ಯಾಯಾಲಯದಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಬಾಕಿ ಉಳಿದಿದ್ದು, ಉಳಿದಂತೆ ಬಹುತೇಕ ಎಲ್ಲ ಪ್ರಕರಣಗಳು ಇತ್ಯರ್ಥಗೊಂಡಿರುವದು ಸಹ ನಮ್ಮ ತಾಲೂಕಿನ ವಿಶೇಷವಾಗಿದೆ. ಇದನ್ನು ಸಹ ಜಿಲ್ಲಾಧಿಕಾರಿಗಳು ಪ್ರಶಂಸಿದ್ದಾರೆ. ನನ್ನ ವಿದ್ಯಾಗುರುಗಳೂ ಆಗಿರುವ ಜಿಲ್ಲಾಧಿಕಾರಿಗಳಾದ ಗೋವಿಂದರಡ್ಡಿ ಅವರಿಂದ ಪ್ರಶಂಸನಾ ಪತ್ರ ಪಡೆದಿರುವದು ಹೆಮ್ಮೆಯ ವಿಷಯವಾಗಿದೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೆಮ್ಮೆ ವ್ಯಕ್ತಪಡಿಸಿದರು.