ಗದಗ: ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಬಳಿ ನಡೆದಿದೆ. ಆದ್ರೆ ಪತ್ನಿಯೇ ಕೊಲೆ ಮಾಡಿ ಅಪಘಾತ ಕಥೆ ಸೃಷ್ಠಿಸಿದ್ಲಾ ಎಂಬ ಅನುಮಾನ ಕುಟುಂಬಸ್ಥರಿಂದ ಕೇಳಿಬಂದಿದೆ. ಕೋಟುಮಚಗಿ ಗ್ರಾಮದ ಮಂಜುನಾಥ್ ಮೀಸಿ (30) ಕೊಲೆಯಾದ ವ್ಯಕ್ತಿಯಾಗಿದ್ದು,
ನಿನ್ನೆ ತಡರಾತ್ರಿ ಮನೆಯಲ್ಲೇ ಗಂಡನನ್ನು ಕೊಂದು ಹೆದ್ದಾರಿಯಲ್ಲಿ ಬಿಸಾಕಿ ಅಪಘಾತ ಕಥೆ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ. ಆಕೆಯನ್ನ ಕೇಳಿದರೆ ನಮ್ಮ ತಮ್ಮನ ಕೊಲೆ ಬಗ್ಗೆ ಗೊತ್ತಾಗುತ್ತೆ ಎಂದು ಪತ್ನಿ ವಿರುದ್ಧ ಮಂಜುನಾಥ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರು ಮಂಜುನಾಥ್ ಪತ್ನಿ ಶಾರದಮ್ಮಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಂಬರಗೆ ಕೊಬ್ಬರಿ ಮಿಕ್ಸಿಗೆ ಹಾಕಿಸಿಕೊಳ್ಳಲು ಕೋಟುಮಚಗಿಯಲ್ಲಿ ಅಕ್ಕ ನನ್ನು ಭೇಟಿಯಾಗಿ ರಾತ್ರಿ ಮರಳಿ ಮಂಜುನಾಥ್ ಮನೆಗೆ ಹೋಗಿದ್ದಾರೆ. ಅಕ್ಕನ ಮನೆಯ ಪಕ್ಕದ ಬಡಾವಣೆಯಲ್ಲಿ ಹೆಂಡತಿ, ಮಕ್ಕಳ ಜೊತೆ ಮಂಜುನಾಥ್ ವಾಸವಿದ್ದರು. ಮಧ್ಯರಾತ್ರಿ 3 ಗಂಟೆಗೆ ಹೆಂಡತಿ ಶಿವಮ್ಮ ಬಂದು ರಸ್ತೆಯಲ್ಲಿ ಬಿದ್ದಿದ್ದಾರೆ ಎಂದು ಮಂಜುನಾಥ್ನ ಅಕ್ಕನಿಗೆ ಹೇಳಿದ್ದಾರೆ.
ಮಾಹಿತಿ ನೀಡಿದ ಬಳಿಕ ಪೊಲೀಸರು ಮತ್ತು ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೊಲೆಯಾದ ಶವದ ವಾಸನೆಯನ್ನು ಶ್ವಾನಕ್ಕೆ ಸಿಬ್ಬಂದಿ ತೋರಿಸಿದ್ದಾರೆ. ಎರಡೇ ನಿಮಿಷದಲ್ಲಿ ಪತ್ನಿ ಮನೆ ಮುಂದೆ ಶ್ವಾನ ಬಂದು ನಿಂತಿದೆ. ತಕ್ಷಣ ಪತ್ನಿಯನ್ನು ಗದಗ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಗದಗ ಎಸ್ಪಿ ಬಿ.ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.