ಹಾಸನ:– ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯದ ವೇಳೆ ಪಿಯು ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ವಿದ್ಯಾರ್ಥಿಗಳು ಪರಸ್ಪರ ಬಡಿದಾಡಿಕೊಂಡು ಮಚ್ಚು ಬೀಸಿರುವ ಘಟನೆ ಜರುಗಿದೆ.
ಆ.30 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪಿಯುಸಿ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ಕಾಲೇಜು ವಿದ್ಯಾರ್ಥಿಗಳ ಗುಂಪಿನ ನಡುವೆ ಜಗಳ ಶುರುವಾಗಿದೆ.
ಈ ವೇಳೆ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದ ಮಚ್ಚು ತೆಗೆದು ಹಲ್ಲೆಗೆ ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಅಪ್ರಾಪ್ತ ವಿದ್ಯಾರ್ಥಿ ಪಾರಾಗಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಇತರೇ ವಿದ್ಯಾರ್ಥಿಗಳು ಮಚ್ಚು ಬೀಸಿದವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಡೆತ ತಾಳಲಾರದೇ ಅಪ್ರಾಪ್ತ ವಿದ್ಯಾರ್ಥಿ ನೆಲಕ್ಕುರಿಳಿದ್ದಾನೆ ಆದರೂ ಬಿಡದೇ ವಿದ್ಯಾರ್ಥಿಗಳು ಕಾಲಿನಿಂದ ಒದ್ದು ಮನಸ್ಸೋ ಇಚ್ಛೆ ಗೂಸಾ ಕೊಟ್ಟಿದ್ದಾರೆ. ಗಾಯಾಳು ವಿದ್ಯಾರ್ಥಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.