ವಿಜಯಸಾಕ್ಷಿ ಸುದ್ದಿ, ಗದಗ : ಜೈನ್ ಧರ್ಮ-ಪರಂಪರೆ ಹಿರಿದಾದದ್ದು. ಅಹಿಂಸಾವಾದಿಗಳಾದ ಜೈನರು ಅಹಿಂಸೆಯಿಂದಲೇ ಧರ್ಮಪಾಲನೆ ಹಾಗೂ ಸಾಧನೆ ಮಾಡುವರು ಎಂದು ಜೈನ್ ಧರ್ಮದ ಹಿರಿಯ ಶ್ರಾವಕರಾದ ಆನಂದ ಬಸ್ತಿ ಹೇಳಿದರು.
ಅವರು ಗದುಗಿನ ಪ್ರಕಾಶ ಮುತ್ತಿನ ಅವರ ಕಟ್ಟಡದಲ್ಲಿರುವ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಕಾರ್ಯಾಲಯದಲ್ಲಿ ಸಂಘದಿಂದ ಏರ್ಪಡಿಸಿದ್ದ ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೈನ್ ಧರ್ಮಿಯರೂ ಸೇರಿದಂತೆ ಪ್ರತಿಯೊಬ್ಬರಲ್ಲೂ ಸಂಯಮ ಗುಣ ಬರಬೇಕು. ತ್ಯಾಗ ಗುಣವನ್ನು ಹೊಂದಬೇಕು. ಆಗಿರುವ ತಪ್ಪನ್ನು ಅರಿತು ಕ್ಷಮೆ ಯಾಚಿಸುವುದೇ ಧರ್ಮ. ಸಾಮೂಹಿಕ ಕ್ಷಮಾವಳಿ ಆಚರಿಸುವ ಮೂಲಕ ಎಲ್ಲರಲ್ಲಿ ಸದ್ಭಾವನೆ ಮೂಡಿಸುವುದೇ ಈ ದಶಲಕ್ಷಣ ಪರ್ವದ ತಿರುಳಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ, ಶಾಸ್ತçಗಳನ್ನು ಓದುವ್ಯದರಿಂದ ಮನ ಪರಿವರ್ತನೆ ಆಗುತ್ತದೆ ಮತ್ತು ಗುರುಗಳ ಸೇವೆಯನ್ನು ಸದಾ ಮಾಡಬೇಕು ಎಂದರು.
ವೇದಿಕೆಯ ಮೇಲೆ ಲೋಹಿತ್ ಕಾಸಾರ, ವಿದ್ಯಾಧರ ಢಾಕಪ್ಪನವರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಂ.ಟಿ. ಕಬ್ಬಿಣ, ಸಂತೋಷ ಕುಲಕರ್ಣಿ, ಆಕಾಶ ಮುತ್ತಿನ, ಶೋಭಾ ಇಂಚಲ, ತುಕೋಳ, ಸುಮನ್ ಮುತ್ತಿನ, ಸುಕನ್ಯಾ ಸೇರಿದಂತೆ ಸಮಾಜಬಾಂಧವರು ಪಾಲ್ಗೊಂಡಿದ್ದರು.
ಸಾಮೂಹಿಕ ಪ್ರಾರ್ಥನೆ ಜರುಗಿತು. ಇತ್ತೀಚೆಗೆ ಅಗಲಿದ ವಿಜಯಕುಮಾರ ಕಬ್ಬಿಣ, ಸುಮಿತ್ರಾ ದೇಸಾಯಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಕಾರ್ಯದರ್ಶಿ ಪ್ರಕಾಶ ಮುತ್ತಿನ ನಿರೂಪಿಸಿದರು. ನಾಗರಾಜ ತುಕೋಳ ವಂದಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಅಪ್ಪಣ್ಣ ಹಂಜೆ ಮಾತನಾಡಿ, ಕ್ಷಮಾ, ಮಾರ್ದವ, ಅರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ, ಬ್ರಹ್ಮಚರ್ಯ ಹೀಗೆ ಒಟ್ಟು ದಶಲಕ್ಷಣಗಳಿಂದ ಕೂಡಿದ ಈ ಪರ್ವಾಚರಣೆಯನ್ನು ಪ್ರತಿ ವರ್ಷ ಆಚರಿಸುವ ಮೂಲಕ ವೈಯುಕ್ತಿಕ, ಸಾಮಾಜಿಕ, ಧಾರ್ಮಿಕವಾಗಿ ಜಾಗೃತಿ ಹೊಂದುವದಾಗಿದೆ ಎಂದರು.
Advertisement