ಬೆಂಗಳೂರು:- ಕರ್ನಾಟಕದಲ್ಲಿ ಮಳೆಯಾಗುತ್ತಿರುವ ಪರಿಣಾಮ ಒಂದು ತಿಂಗಳಿನಿಂದ ಈರುಳ್ಳಿ ಬೆಲೆ ಏರಿಕೆಯಾಗಿತ್ತು. ಸದ್ಯ ಒಂದು ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿ ನಿಗದಿಯಾಗಿದೆ.
ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಕಡಿಮೆ ಬೆಲೆಗೆ ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ರೋಸಿ ಹೋಗಿದ್ದರು. ಇದೀಗ ಎನ್ಸಿಸಿಎಫ್ನಿಂದ ಸದ್ಯ ಕಡಿಮೆ ಬೆಲೆಗೆ ಈರುಳ್ಳಿಯನ್ನು ವಿತರಣೆ ಮಾಡಾಲಾಗುತ್ತಿದ್ದು, ಸಾಕಷ್ಟು ಗ್ರಾಹಕರು ಖುಷಿಯಿಂದ ಈರುಳ್ಳಿಯನ್ನ ಖರೀದಿ ಮಾಡುತ್ತಿದ್ದಾರೆ.
ಕೇಂದ್ರ ಸರಕಾರವು ಬೆಲೆ ಸ್ಥಿರೀಕರಣ ನಿಧಿ ಅಡಿ 550 ಉತ್ಪನ್ನಗಳನ್ನು ಗುರುತಿಸಿದ್ದು, ಯಾವ ಉತ್ಪನ್ನದ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತದೋ ಅಂತಹ ಉತ್ಪನ್ನವನ್ನು ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಬೆಲೆ ಇಳಿಕೆಗೆ ಸಹಕಾರಿಯಾಗುವ ಮೂಲಕ ಗ್ರಾಹಕರಿಗೆ ಉಂಟಾಗುವ ಹೊರೆಯನ್ನು ಇಳಿಸಲಾಗುತ್ತಿದೆ.
ಅದೇ ರೀತಿ ಇದೀಗ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದರ 70 ರೂ.ಗೆ ತಲುಪಿದೆ. ಅದರಲ್ಲಿ ಸಣ್ಣ ಗಾತ್ರದ, ಗುಣಮಟ್ಟವಲ್ಲದ ಈರುಳ್ಳಿ 40-50 ರೂ.ಗೆ ಲಭ್ಯವಾಗುತ್ತಿವೆ. ಹೀಗಾಗಿ ಮಹಾರಾಷ್ಟ್ರ, ಮಧ್ಯಪ್ರದೇಶದಿಂದ ಗುಣಮಟ್ಟದ ಈರುಳ್ಳಿಯನ್ನು ಖರೀದಿಸಿ, ದೇಶದ ಮೆಟ್ರೋ ಸಿಟಿಗಳಲ್ಲಿ ವಿತರಣೆ ಮಾಡಲು ಆರಂಭಿಸಿದೆ.
ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ ಕೆಜಿ ಗೆ 35 ರೂ. ಯಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವವರೆಗೆ ಮಾರಾಟ ಮುಂದುವರಿಯಲಿದೆ.
ಪ್ರತಿದಿನವು ವಿತರಣೆ ಜಾಗವನ್ನ ಗುರುತಿಸಿ ಜನನಿಬಿಡ ಪ್ರದೇಶಗಳಲ್ಲಿ ಒಟ್ಟು 122 ಕಡೆ ವ್ಯಾಪಾರ ಮಾಡಲಾಗುತ್ತಿದ್ದು, ಬೆಲೆ ಕಡಿಮೆ ಕಡಿಮೆಯಾಗುವರೆಗೂ ಈ ವ್ಯಾಪಾರ ಮಾಡಲಾಗುತ್ತದೆಯಂತೆ. ಇನ್ನು ಬೆಳ್ಳಗ್ಗೆ 10 ಗಂಟೆಯಿಂದ ಆಭಂಭವಾಗಿ ಸಂಜೆ 6 ಗಂಟೆಯವರೆಗೂ ಈರುಳ್ಳಿ ವಿತರಣೆ ಇರಲಿದ್ದು, ಮೂರು ದಿನದಿಂದ 18 ಟನ್ಗೂ ಹೆಚ್ಚು ಈರುಳ್ಳಿ ಸೇಲ್ ಆಗಿದೆ ಎಂದು ಎನ್ಸಿಸಿಎಫ್ ಸಿಬ್ಬಂದಿ ಮಂಜುನಾಥ್ ಹೇಳಿದ್ದಾರೆ.