ವಿಜಯನಗರ:- ಜಿನ್ನಿ ಮಿಲ್ಕ್ ಕಂಪನಿಯು ನೂರಾರು ರೈತರಿಗೆ ಕತ್ತೆಗಳನ್ನು ಮಾರಾಟ ಮಾಡಿ ಮೋಸ ಮಾಡಿದ ಪ್ರಕರಣವನ್ನು CID ಎತ್ತಿಕೊಂಡಿದೆ.
ಜಿನ್ನಿ ಮಿಲ್ಕ್ ಕಂಪನಿ ಎಂಡಿ, ಮ್ಯಾನೇಜರ್ 13.50 ಕೋಟಿಗೂ ಅಧಿಕ ಹಣ ವಂಚನೆ ಮಾಡಿ ಇಬ್ಬರೂ ನಾಪತ್ತೆಯಾಗಿದ್ದಾರೆ. ಸದ್ಯ ಸಿಐಡಿ ಟೀಂ ಈ ವಂಚನೆ ಜಾಲ ಬೇಧಿಸಲಿದೆ.
ಇನ್ನೆರಡು ದಿನಗಳಲ್ಲಿ ಸಿಐಡಿ ಅಧಿಕಾರಿಗಳ ತಂಡ ಹೊಸಪೇಟೆಗೆ ಭೇಟಿ ನೀಡಲಿದೆ. ಕತ್ತೆ ಹಾಲಿನ ಮೋಸದ ಜಾಲಕ್ಕೆ ಸಿಲುಕಿ 300ಕ್ಕೂ ಅಧಿಕ ಅನ್ನದಾತರು ಪರದಾಡುತ್ತಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಹೊಸಪೇಟೆ ನಗರ ಠಾಣೆಗೆ ಆಗಮಿಸಿ ನೂರಾರು ರೈತರು ದೂರು ಸಲ್ಲಿಸುತ್ತಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಬಾಗಲಕೋಟಿ, ಬಿಜಾಪುರ, ಗದಗ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ರೈತರು ಹೊಸಪೇಟೆಗೆ ಆಗಮಿಸಿ ಕತ್ತೆ ಖರೀದಿಗೆ ಹಣ ಹೂಡಿ ಒಡಂಬಡಿಕೆ ಬಾಂಡ್ ಸಮೇತ ದೂರು ಸಲ್ಲಿಸುತ್ತಿದ್ದಾರೆ.
ದೂರು ದಾಖಲಾಗಿ 7 ದಿನ ಕಳೆದ್ರೂ ಜಿನ್ನಿ ಮಿಲ್ಕ್ ಕಂಪನಿ ಎಂಡಿ ನೂತಲಪತಿ ಮುರಳಿ, ಮ್ಯಾನೇಜರ್ ಶಂಕರ ರೆಡ್ಡಿ ಪತ್ತೆಯಾಗಿಲ್ಲ. ವಿಜಯನಗರ ಪೊಲೀಸ್ ಇಲಾಖೆ ಪ್ರಕರಣ ಬೇಧಿಸಲು ಮೂರು ವಿಶೇಷ ತಂಡ ರಚಿಸಿದೆ.
ಆಂಧ್ರದ ಅನಂತಪುರಂ, ನೆಲ್ಲೂರಿನಲ್ಲಿ ಎರಡು ತಂಡಗಳು ಶೋಧ ನಡೆಸುತ್ತಿವೆ. ಇನ್ನು ಹೊಸಪೇಟೆಯಲ್ಲೂ ಮತ್ತೊಂದು ವಿಶೇಷ ತನಿಖಾ ತಂಡ ಬೀಡು ಬಿಟ್ಟಿದೆ.
ಇನ್ನೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಳೆದ ಆರು ತಿಂಗಳ ಹಿಂದೆ ‘ಜಿನ್ನಿ ಮಿಲ್ಕ್’ ಎಂಬ ಕಂಪನಿಯು ಆಫೀಸ್ಯೊಂದನ್ನ ತೆರೆದು ಕತ್ತೆಗಳ ಸಾಕಾಣಿಕೆ ಮಾಡಿ, ಹೈನುಗಾರಿಕೆಯಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯಿರಿ ಎಂದು ಸ್ಲೋಗನ್ ಹಾಕಿ ರೈತರಿಗೆ ಕತ್ತೆಗಳನ್ನ ಮಾರಾಟ ಮಾಡಿತ್ತು. ರೈತರು ಅದನ್ನ ನಂಬಿ ಮೂರು ಲಕ್ಷ ರೂಗೆ ಮೂರು ಕತ್ತೆ ಹಾಗೂ ಮೂರು ಕತ್ತೆ ಮರಿಗಳನ್ನ ಖರೀದಿ ಮಾಡಿದ್ದರು.
ಮೊದಲಿಗೆ ಒಂದು ಲೀಟರ್ ಕತ್ತೆ ಹಾಲಿಗೆ 2300 ರೂ ಕೊಟ್ಟು ಜಿನ್ನಿ ಕಂಪನಿಯೇ ಖರೀದಿ ಮಾಡುತ್ತಿತ್ತು. ಆದ್ರೆ, ಕಂಪನಿ ಟ್ರೇಡ್ ಲೈಸೆನ್ಸ್ ಹೊಂದಿಲ್ಲ ಎಂದು ವಿಜಯನಗರ ಜಿಲ್ಲಾಡಳಿತ ಆ ಆಫೀಸನ್ನ ಕ್ಲೋಸ್ ಮಾಡಿಸಿದೆ. ಲಕ್ಷಾಂತರ ಬಂಡವಾಳ ಹಾಕಿದ ಜನ್ರಿಗೆ ಜಿನ್ನಿ ಕಂಪನಿ ಮೋಸ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ.