ಮೈಸೂರು: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಸಂಬಂಧ ಮಾಜಿ ಸಚಿವ ಸಾ.ರಾ. ಮಹೇಶ್ ಗಂಭೀರ ಆರೋಪಗಳನ್ನು ಮಾಡಿದ್ದು, ಬೂತ್ ಮಟ್ಟದ ಅಧಿಕಾರಿಗಳೇ (ಬಿಎಲ್ಒ) ಹಣ ನೀಡಿ ಇತರರಿಂದ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಮೂರು ವಾರ್ಡ್ಗಳಲ್ಲಿ ಮತದಾರರ ಅರ್ಜಿಗಳನ್ನು ಸಂಬಂಧಪಟ್ಟ ವ್ಯಕ್ತಿಗಳ ಬದಲು ಇತರರಿಂದ ಭರ್ತಿ ಮಾಡಿಸಲಾಗುತ್ತಿದೆ ಎಂದು ಹೇಳಿದರು.
“ಬಿಎಲ್ಒಗಳೇ ಒಂದು ಅರ್ಜಿಗೆ ₹50 ನೀಡುವ ಮೂಲಕ ಕೆಲ ಕಾರ್ಯಕರ್ತರಿಂದ ಅರ್ಜಿ ಭರ್ತಿ ಮಾಡಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದ ಕಾರಣ, ತಮ್ಮ ಖರ್ಚಿನಲ್ಲೇ ಇತರರನ್ನು ಬಳಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ” ಎಂದು ಸಾ.ರಾ. ಮಹೇಶ್ ಆರೋಪಿಸಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಅವರು, “ಗೃಹ ಸಚಿವರ ಹೇಳಿಕೆ ನೋಡಿದರೆ ಅವರಿಗೆ ಕಾನೂನಿನ ಅರಿವು ಇಲ್ಲ ಎನ್ನುವ ಭಾವನೆ ಮೂಡುತ್ತದೆ. ಕಾನೂನು ತಿಳಿದವರು ಮಾತನಾಡುವ ರೀತಿಯಲ್ಲಿ ಅವರು ಮಾತನಾಡಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ, “ಈ ವಿಷಯದಲ್ಲಿ ಸರ್ಕಾರದ ಇತರ ಸಚಿವರು ಯಾರೂ ಮಾತನಾಡುತ್ತಿಲ್ಲ. ಆದರೆ ಗೃಹ ಸಚಿವರು ಮಾತ್ರ ಈ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಏಕೆ? ಕಾನೂನುಬಾಹಿರ ಎಂದು ಆರೋಪಿಸಲಾಗುತ್ತಿರುವ ವಿಷಯವನ್ನು ಅವರು ಯಾಕೆ ಸಮರ್ಥಿಸುತ್ತಿದ್ದಾರೆ? ಎಸ್ಐಆರ್ ಎಂಬ ವಿಚಾರ ಪ್ರಸ್ತಾಪವಾದ ತಕ್ಷಣ ಗೃಹ ಸಚಿವರಿಗೆ ಭಯ ಏಕೆ?” ಎಂದು ಪ್ರಶ್ನಿಸಿದರು.



