ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಜೋಡು ರಸ್ತೆಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಿಸಲು ಪುರಸಭೆ ಮುಂದಾಗಬೇಕು ಎಂದು ಒತ್ತಾಯಿಸಿ ಶುಕ್ರವಾರ ಕ್ರಾಂತಿಸೂರ್ಯ ಜೈಭೀಮ್ ಸೇನೆ ಪದಾಧಿಕಾರಿಗಳು ಮುಖ್ಯಾಧಿಕಾರಿಗೆ ಮನವಿ ನೀಡಿದರು.
ಸಂಘಟನೆಯ ಮುಖಂಡ ಪ್ರಕಾಶ ರಾಠೋಡ ಮಾತನಾಡಿ, ಪಟ್ಟಣದ ಜೋಡು ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ ಅವರ ಹೆಸರಿನಲ್ಲಿ ವೃತ್ತ ನಿರ್ಮಿಸಲಾಗಿದೆ. ಆದರೆ, ಡಾ. ಅಂಬೇಡ್ಕರ್ ಅವರ ಪುತ್ಥಳಿಯನ್ನು ವೃತ್ತದಲ್ಲಿ ಪುರಸಭೆ ಇನ್ನೂ ನಿರ್ಮಿಸಿಲ್ಲ. ಹೀಗಾಗಿ ಪುರಸಭೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ, ಪ್ರಸ್ತುತ ಸಾಲಿನ ಎಸ್ಎಫ್ಸಿ ಹಾಗೂ ಪುರಸಭೆ ನಿಧಿ ಬಳಸಿಕೊಂಡು ಅಂಬೇಡ್ಕರ್ ಅವರ ವೃತ್ತದಲ್ಲಿ ಮಹಾನಾಯಕ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಈ ವೇಳೆ ಕನಕಪ್ಪ ಕಲ್ಲೊಡ್ಡರ, ರವಿ ನಿಡಗುಂದಿ, ಅಮಿತ ಭಜಂತ್ರಿ, ರಮೇಶ ತಳವಾರ, ದುರಗಪ್ಪ ಪೂಜಾರ, ಮಾರುತಿ ಬಂಕದ, ಶುಭಂ ಮಾರನಾಳ, ಕಿರಣ ವಡ್ಡರ, ಮಾರುತಿ ವಡ್ಡರ ಮುಂತಾದವರಿದ್ದರು.