ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ರೋಟರಿ ಕ್ಲಬ್ ಹಾಗೂ ಗದುಗಿನ ಸ್ಪಂದನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯ ಆಶ್ರಯದಲ್ಲಿ ವಿಶ್ವ ಕಿವುಡರ ದಿನಾಚರಣೆ ಹಾಗೂ ಮಕ್ಕಳ ದಂತ ತಪಾಸಣೆ ಕಾರ್ಯಕ್ರಮವನ್ನು ನಗರದ ಸ್ಪಂದನ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಮಕ್ಕಳ ದಂತವನ್ನು ಪರೀಕ್ಷಿಸಿ ಸಲಹೆ ನೀಡಿದ ದಂತ ಚಿಕತ್ಸಕ ಹಾಗೂ ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ರೇವಣಸಿದ್ಧೇಶ್ವರ ಉಪ್ಪಿನ, ಮಕ್ಕಳು ದಂತಕ್ಷಯ ಬರದಂತೆ ಹಲ್ಲುಗಳನ್ನು ರಕ್ಷಿಸಿಕೊಳ್ಳಲು ಬೆಳಿಗ್ಗೆ ಹಾಗೂ ಸಂಜೆ ಸರಿಯಾದ ಕ್ರಮದಲ್ಲಿ ಹಲ್ಲುಜ್ಜಬೇಕು. ಸಿಹಿ ಪದಾರ್ಥ ಹಾಗೂ ಅತಿಯಾದ ಚಾಕಲೇಟ್ ಸೇವೆನೆ ಒಳ್ಳೆಯದಲ್ಲ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖ್ಯೋಪಾಧ್ಯಾಯ ಎಸ್.ಬಿ. ಬಾಗೇವಾಡಿ ಮಾತನಾಡಿ, ವಿಶೇಷ ಚೇತನ ಮಕ್ಕಳ ಆರೋಗ್ಯ ರಕ್ಷಣೆಯತ್ತ ನಾವೆಲ್ಲರೂ ಹೆಚ್ಚು ಗಮನ ಹರಿಸಬೇಕು. ಸರಿಯಾದ ಜೀವನ ಕ್ರಮವನ್ನು ರೂಢಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದರು.
ಕ್ರಾಂತಿ ಸೇನಾ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಬಾಲ್ಯದಲ್ಲಿಯೇ ಈ ಮಕ್ಕಳು ತಮಗೆ ಅರಿವಿಲ್ಲದೆ ವಿಶೇಷ ಚೇತನ ಮಕ್ಕಳಾಗಿದ್ದು, ಪ್ರೀತಿ-ವಾತ್ಸಲ್ಯದಿಂದ ನಾವು ಇವರ ಮನಸ್ಸನ್ನು ಗೆದ್ದು ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.
ಸ್ಪಂದನಾ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಫ್. ದ್ಯಾವನಗೌಡ್ರ ಮಾತನಾಡಿ, ಮೂಗ ಮತ್ತು ಕಿವುಡು ಮಕ್ಕಳು ನೋಡಬಲ್ಲರು ಮತ್ತು ತಿಳಿಯಬಲ್ಲರು. ಆದರೆ ಉತ್ತರಿಸಲಾಗದೇ ಚಡಪಡಿಸುವರು. ಇವರಿಗೆ ಜೀವನ ಕೌಶಲ್ಯಗಳನ್ನು ನಾವು ಹೆಚ್ಚು ರೂಢಿ ಮಾಡುವುದರಿಂದ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುವದು ಎಂದರು.
ವೇದಿಕೆ ಮೇಲೆ ಎಸ್.ಎಸ್. ಹೊಸಳ್ಳಿಮಠ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯೆ ಲಲಿತಾ ಪಾಟೀಲ ಸ್ವಾಗತಿಸಿದರು. ಶಾಂತಾ ಗದಗ ನಿರೂಪಿಸಿದರು. ಚಂದ್ರಮ್ಮ ಕೊಟಗಿ ಪರಿಚಯಿಸಿದರು. ವಿದ್ಯಾ ಪೂಜಾರ ವಂದಿಸಿದರು.