ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ಮಾನವಿದೆ. ಇಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೆಯೋ ಅಲ್ಲಿ ದೇವತೆಗಳು ವಾಸವಿರುತ್ತಾರೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಹೊಸ ಹಿರೇಮಠದಲ್ಲಿ 6ನೇ ದಿನದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ನಂತರ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಯಾವುದೇ ಮನೆಯಲ್ಲಿ ಮಹಿಳೆ ನಗುನಗುತ್ತ ಇದ್ದರೆ ಆ ಮನೆ ಆನಂದದಿಂದ ಇರುತ್ತದೆ. ಇದರಿಂದ ಗಂಡನ ಮನೆಗೂ, ತವರು ಮನೆಗೂ ಒಳ್ಳೆಯದಾಗುತ್ತದೆ. ಅದಕ್ಕಾಗಿ ಮದುವೆಯಾಗಿ ಮನೆಗೆ ಬಂದ ಮಹಿಳೆಯನ್ನು ಗಂಡನ ಮನೆಯವರು ಚೆನ್ನಾಗಿ ನೋಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಚಿಕ್ಕಪುಟ್ಟ ವಿಚಾರಗಳಿಗೆ ಕುಟುಂಬಗಳು ಶಿಥಿಲವಾಗುವುದನ್ನು ಕಾಣುತ್ತಿದ್ದೇವೆ. ಗಂಡ-ಹೆಂಡಿರಿಬ್ಬರೂ ಸಂಸಾರವೆಂಬ ರಥದ ಎರಡು ಗಾಲಿಗಳು. ಎರಡೂ ಸಮನಾಗಿ ಚಲಿಸಿದಾಗ ಜೀವನವೆಂಬ ರಥ ಚೆನ್ನಾಗಿ ಓಡುತ್ತದೆ. ಅದಕ್ಕಾಗಿ ನೀವು ನಿಮ್ಮ ಬಾಳು ಎಂದಿಗೂ ಶಿಥಿಲವಾಗದಂತೆ ನೋಡಿಕೊಳ್ಳಿ ಎಂದು ಜಗದ್ಗುರುಗಳು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಮಹಿಳೆಯರಲ್ಲಿ ಧರ್ಮಾಚರಣೆ, ತ್ಯಾಗ, ಕಷ್ಟ ಸಹಿಷ್ಣುತೆ, ಪ್ರಾಮಾಣಿಕತೆ ಎಂಬಿತ್ಯಾದಿ ಗುಣಗಳಿರುವುದರಿಂದ ಅವರನ್ನು ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಇಂದಿನ ಮಹಿಳೆಯರು ಕುಂಕುಮವನ್ನು ಇಡುವದರ ಬದಲಿಗೆ ಟಿಕಳಿಗಳನ್ನು ಇಡುತ್ತಿರುವುದು ವಿಷಾದನೀಯ ಎಂದು ತಿಳಿಸಿದ ಜಗದ್ಗುರುಗಳು, ನಿಮಗೆ ಅದೆಷ್ಟೇ ಕಷ್ಟವಾದರೂ ನೀವು ಹಣೆಗೆ ಕುಂಕುಮವನ್ನು ಇಡುವುದನ್ನು ರೂಢಿಸಿಕೊಳ್ಳುವ ಪ್ರತಿಜ್ಞೆ ಮಾಡಿ. ಅಂದರೆ ಅಬ್ಬಿಗೇರಿಯಲ್ಲಿ ದಸರಾ ಮಹೋತ್ಸವ ನೆರವೇರಿಸಿದ್ದು ಸಾರ್ಥಕವೆನ್ನಿಸುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.
ಇಷ್ಟಲಿಂಗ ಮಹಾಪೂಜೆಯ ಸಮಯದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಸಭೆಯನ್ನುದ್ದೇಶಿಸಿ ಸಂಯುಕ್ತಾ ಬಂಡಿ, ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು. ವೇದಿಕೆಯ ಮೇಲೆ ಸಂಸದ ಬಸವರಾಜ ಬೊಮ್ಮಾಯಿಯವರ ಧರ್ಮಪತ್ನಿ ಚನ್ನಮ್ಮ ಉಪಸ್ಥಿತರಿದ್ದರು.
ನಮ್ಮ ಪಂಚ ಪೀಠಗಳಿವೆ. ಈ ಐದೂ ಪೀಠಗಳು ಎಂದಿಗೂ ಜನರ ಬದುಕು ಹಸನಾಗಿರಬೇಕು ಎಂಬುದನ್ನೇ ಬಯಸುತ್ತವೆ. ಪ್ರತಿಯೊಂದು ಪೀಠಕ್ಕೂ ಅದರದೇ ಆದ ಧ್ವಜವಿದೆ. ಪ್ರತಿ ಧ್ವಜದ ಬಣ್ಣವೂ ಒಂದೊಂದು ಸಂಕೇತವನ್ನು ಸೂಚಿಸುತ್ತವೆ. ಈ ಐದೂ ಬಣ್ಣಗಳ ಸಂಕೇತಗಳನ್ನು ಒಳಗೊಂಡಿರುವ ಮಹಿಳೆಯೇ ಮುತ್ತೈದೆ ಎಂದು ಕರೆಯಿಸಿಕೊಳ್ಳುತ್ತಾಳೆ. ಪೀಠಗಳಿಗೆ ಮತ್ತು ಮಾತೆಯರಿಗೆ ಅವಿನಾಭಾವ ಸಂಬಂಧವಿದೆ. ಆದರೆ ಕೆಲವು ಜನ ವಿಚಾರವಾದಿಗಳು, ಮಠಾಧೀಶರು ಈ ಸಂಬಂಧವನ್ನು ಹಾಳು ಮಾಡಲು ನೋಡಿದರು. ಆದರೆ ಅವರು ಯಶ ಕಾಣಲಿಲ್ಲ ಎಂದು ಶ್ರೀಗಳು ತಿಳಿಸಿದರು.