ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ತಿಮ್ಮಾಪೂರ ಗ್ರಾಮದ ದುರ್ಗಾ ದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ವಿಶೇಷ ಬನ್ನಿ ಮುಡಿಯುವ ಕಾರ್ಯಕ್ರಮ ಜರಗಿತು. ಈ ಗ್ರಾಮದ ಸಂಪ್ರದಾಯದಂತೆ ಇದೇ ದಿನ ಮೊಳಕೆಯೊಡೆದ ಬನ್ನಿ ಸಸಿಯನ್ನು ಪತ್ತೆಹಚ್ಚಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಸಂಪ್ರದಾಯದಂತೆ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು, ರೈತರ ಜಮೀನುಗಳಲ್ಲಿ ಮೊಳಕೆಯೊಡೆದ ಬನ್ನಿ ಸಸಿಯನ್ನು ಹುಡುಕುತ್ತಾ ಹೊರಟ ಭಕ್ತಾದಿಗಳು ಎರಡು ಗಂಟೆಗಳ ಕಾಲ ಹುಡುಕಿದ ನಂತರ ಮೊಳಕೆಯೊಡೆದ ಬನ್ನಿ ಸಸಿ ಸಿಕ್ಕ ತರುವಾಯ ಪೂಜೆ ಸಲ್ಲಿಸಿ ಬನ್ನಿ ಮುಡಿಯಲು ಪ್ರಾರಂಭವಾಯಿತು.
ಗ್ರಾಮದ ರೈತ ಭೀಮಪ್ಪ ದೇವಪ್ಪ ಕಂಕರಿ ಇವರ ಜಮೀನಿನಲ್ಲಿ ಮೊಳಕೆಯೊಡೆದ ಬನ್ನಿ ಸಸಿ ಪತ್ತೆಯಾಯಿತು.
ದುರ್ಗಾ ದೇವಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸುಮಂಗಲಿಯರು ದೇವಿಗೆ ಉಡಿ ತುಂಬಿದ ನಂತರ ಗ್ರಾಮದಲ್ಲಿ ದಸರಾ ದರ್ಬಾರ್ ನಡೆಯಿತು. ಬನ್ನಿ ಮುಡಿಯುವ ಕಾರ್ಯಕ್ರಮದ ನಂತರ ಗ್ರಾಮಸ್ಥರು ಪರಸ್ಪರ ಬನ್ನಿ ವಿನಿಮಯ ಮಾಡುವುದರ ಮೂಲಕ ಶುಭಾಶಯ ಕೋರಿದರು.