ವಿಜಯಸಾಕ್ಷಿ ಸುದ್ದಿ, ಮುಳಗುಂದ : ಭಾರತೀಯ ಸಂಸ್ಕೃತಿಯಲ್ಲಿ ಆಗಾಧ ಶಕ್ತಿ ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು ಪಟ್ಟಣದ ರೇಣುಕಾ ಎಲ್ಲಮ್ಮಾ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಜರುಗಿದ 18ನೇ ವರ್ಷದ ದೇವಿ ಪುರಾಣ ಮಂಗಲೋತ್ಸವದಲ್ಲಿ ಪುರಾಣ ಪ್ರವನಕಾರ ಶಿದ್ದಣ್ಣಾ ಜವಳಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ವಿಜಯದಶಮಿ ವಿಜಯದ ಸಂಕೇತವಾಗಿದೆ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯ ಸಂಕೇತವನ್ನು ದೇವಿ ಪುರಾಣ ತಿಳಿಸುತ್ತದೆ. ದೇವಿ ಪುರಾಣ ಸಾರ್ಥಕವಾಗಲು ನಮ್ಮಲ್ಲಿರುವ ದುರ್ಗುಣಗಳನ್ನು ಕಳೆದು ಸದ್ಗುಣಗಳನ್ನು ಹೊಂದಿದಾಗ ಬದುಕು ಸುಂದರವಾಗುತ್ತದೆ. ನಾವೆಲ್ಲರೂ ಸತ್ಯ, ನ್ಯಾಯ, ನೀತಿಯ ಮಾರ್ಗದಲ್ಲಿ, ಧರ್ಮದ ಮಾರ್ಗದಲ್ಲಿ ಸಾಗಬೇಕಲ್ಲದೆ, ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿಬೆಳಸಿಕೊಂಡು ಹೋಗುವುದರಿಂದ ಸಮಾಜ ಸುಧಾರಣೆಗೊಳ್ಳುತ್ತದೆ ಎಂದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಂದಿನ ಯಾಂತ್ರಿಕ ಬದುಕಿಗೆ ಮಾರುಹೋಗಿ ನಮ್ಮ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಮರೆತು, ಸಮಯ, ಹಣ, ಅಂಕಗಳ ಬೆನ್ನು ಹತ್ತಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಸಂಸ್ಕಾರ, ಉತ್ತಮ ಶಿಕ್ಷಣ ನೀಡಿ. ಮಕ್ಕಳ ಕೈಯಲ್ಲಿ ಮೊಬೈಲ್ ನೀಡದೇ ಸದಾ ಪುಸ್ತಕ ಕೊಡಿ ಎಂದರು.
ಸಾನ್ನಿಧ್ಯವನ್ನು ನೀಲಗುಂದ ಪ್ರಭುಲಿಂಗ ದೇವರು, ಸಮ್ಮುಖವನ್ನು ಗದಗ ಅಡವೀಂದ್ರಸ್ವಾಮಿಮಠದ ಮಹೇಶ್ವರ ಸ್ವಾಮೀಜಿ, ಅಧ್ಯಕ್ಷತೆಯನ್ನು ಡಾ. ಎಸ್.ಸಿ. ಚವಡಿ ವಹಿಸಿದ್ದರು. ಎಂ.ಡಿ. ಬಟ್ಟೂರ, ಅಶೋಕ ಸೋನಗೋಜಿ, ಪಿ.ಎ. ವಂಟಕರ್, ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಬಸವರಾಜ ಹಾರೋಗೇರಿ, ದ್ಯಾಮಣ್ಣಾ ನೀಲಗುಂದ, ಮಾಹಾಂತೇಶ ಕಣವಿ, ಪೀರಸಾಬ ಶೇಖ, ಸಿ.ಎಸ್. ಪತ್ರಿ, ಆನಂದ ಸಿದ್ದನಗೌಡರ, ಪ್ರಕಾಶ ಮದ್ದಿನ, ವರ್ಷಾ ಬಾರಕೇರ ಇದ್ದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ ಆರ್ಯ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶ್ವ ಮಟ್ಟದಲ್ಲಿ ಅಗ್ರ ಸ್ಥಾನವಿದೆ. ಯೋಗದಲ್ಲಿ ಜ್ಞಾನ, ಕಾಯಕ, ಭಕ್ತಿ, ಶಕ್ತಿ ಅಡಗಿದೆ. ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ನೆಮ್ಮದಿ ಹೊಂದಲು ಸಾಧ್ಯವಾಗುತ್ತದೆ ಎಂದರು.