ವಿಜಯಸಾಕ್ಷಿ ಸುದ್ದಿ, ಗದಗ : ಆಸ್ಪತ್ರೆಗೆ ಬರುವ ರೋಗಿಗಳನ್ನು ಆರೈಕೆ ಮಾಡಿ ಶೀಘ್ರ ಗುಣಮುಖರಾಗಿಸುವಲ್ಲಿ ವೈದ್ಯರಷ್ಟೇ ಸೇವೆ ಮಾಡುವ ಶುಶ್ರೂಷಕರ ಪಾತ್ರ ದೊಡ್ಡದಾಗಿದೆ. ಆದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುವರು ದೇವರ ಸಮಾನರು ಎಂದು ಡಾ. ವಿ.ಎಸ್.ವಿ ಪ್ರಸಾದ ಹೇಳಿದರು.
ಅವರು ಸಂಕನೂರ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ಬಿ.ಎಸ್ಸಿ ನರ್ಸಿಂಗ್ 3ನೇ ಬ್ಯಾಚ್ನ ಶೈಕ್ಷಣಿಕ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿಯ ಸನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ನ ಪ್ರಾಚಾರ್ಯ ಮಹೇಶ ಗದಗ ಮಾತನಾಡಿ, ವಿದ್ಯಾರ್ಥಿಗಳಿಗೆ ನರ್ಸಿಂಗ್ ಕೋರ್ಸಿನ ಮಹತ್ವವನ್ನು ತಿಳಿಸಿ, ಪಠ್ಯ ಜ್ಞಾನದ ಮೂಲಕ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಿ ಜ್ಞಾನ ಸಂಪಾದನೆ ಮಾಡಬೇಕೆಂದು ಹೇಳಿದರು. ಮಹೇಶ ಗೋರ್ಪಡೆ ಮಾತನಾಡಿ, ನರ್ಸಿಂಗ್ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಲಭ್ಯವಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಇಚ್ಛಾಶಕ್ತಿಯನ್ನು ಹೊಂದಿರಬೇಕು. ಅಂದಾಗ ಮಾತ್ರ ಯಾವುದೇ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ವೇದಿಕೆ ಮೇಲೆ ಡಾ. ಪ್ರಕಾಶ ಸಂಕನೂರ, ಡಾ. ಶ್ವೇತಾ ಸಂಕನೂರ, ಡಾ. ರಾಜೇಶ ಜನ್ನಾ ಪ್ರಾಚಾರ್ಯರಾದ ಶ್ರೀಮತಿ ದೇವಾಂಗಮಠ, ಸುಭಾಷ ಸಂಕನೂರ, ಅಂದಪ್ಪ ಸಂಕನೂರ ಉಪಸ್ಥಿತರಿದ್ದರು.
ರಶ್ಮಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಪಾಟೀಲ ವಂದಿಸಿದರು.



