ಚಿಕ್ಕಮಗಳೂರು:- ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು ಮತ್ತು ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ವಿದ್ಯುತ್ ತಂತಿ ತುಳಿದು ನಿನ್ನೆ ಕಾಡಾನೆ ಮೃತಪಟ್ಟಿತ್ತು. ಸಾವನ್ನಪ್ಪಿದ ಸಲಗದ ಬಳಿ 23 ಕಾಡಾನೆಗಳು ಬೀಡು ಬಿಟ್ಟಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೃತಪಟ್ಟ ಸಲಗದ ಬಳಿ ಇರುವ 23 ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಮೃತಪಟ್ಟದ ಆನೆ ಬಳಿ ತೆರಳಲು ಅರಣ್ಯ ಇಲಾಖೆಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಇನ್ನು, ಕಾಡಾನೆಗಳ ಹಿಂಡು ಅರಣ್ಯ ಇಲಾಖೆ ಮತ್ತು ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ಕಾಡಾನೆಗಳು ತಾವಾಗಿಯೇ ತೆರಳುವವರೆಗು ಸಾವನ್ನಪ್ಪಿದ ಸಲಗದ ಬಳಿ ತೆರಳದಂತೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸಾವನ್ನಪ್ಪಿದ ಸಲಗ ವಿಕ್ರಾಂತ್ ಎಂದು ಮಾಹಿತಿ ನೀಡಿದ್ದಾರೆ.