ವಿಜಯಸಾಕ್ಷಿ ಸುದ್ದಿ, ಗದಗ: ಭಗವದ್ಗೀತೆಯು ಕುರುಕ್ಷೇತ್ರದ ಯುದ್ಧಭೂಮಿಗೆ ಮಾತ್ರ ಸೀಮಿತವಾದ ಬೋಧೆಯಲ್ಲ. ಬದಲಿಗೆ ಪ್ರತಿಯೊಬ್ಬ ಮನುಷ್ಯನೂ ತನ್ನ ದೈನಂದಿನ ಜೀವನದಲ್ಲಿ ಎದುರಿಸುವ ಮಾನಸಿಕ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಬದುಕಿನ ಗೊಂದಲಗಳಿಗೆ ಪರಿಹಾರ ಸಿಗಲು ಭಗವದ್ಗೀತೆಯ ಪಾರಾಯಣ ದಿವ್ಯ ಔಷಧ ಎಂದು ಪ್ರವಚನ ಭಾಸ್ಕರ ಡಾ.ಪಾವಗಡ ಪ್ರಕಾಶರಾವ್ ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತೆ ಪ್ರವಚನದ ೫ನೇ ದಿನದ ಉಪನ್ಯಾಸ ನೀಡುತ್ತಾ ಮಾತನಾಡಿ, ಭಗವದ್ಗೀತೆಯು ಕೇವಲ ಮಹಾಭಾರತದ ಕಥಾನಕವಲ್ಲ, ಬದಲಿಗೆ ಜೀವನ ಸಾರ್ಥಕಗೊಳಿಸುವ, ಮೋಕ್ಷ ಪ್ರಾಪ್ತಿ ನೀಡುವ ಶಾಸ್ತ್ರವಾಗಿದೆ ಎಂದರು.
ಪ್ರಪಂಚದಲ್ಲೇ ಅತೀ ಸುದೀರ್ಘ ಮತ್ತು ಆಳವಾದ ಸಾಹಿತ್ಯ ಹೊಂದಿರುವ ಭಗವದ್ಗೀತೆಯನ್ನು ವ್ಯಾಸ ಮಹರ್ಷಿಗಳು ಸ್ವತಃ ರಚಿಸಲಿಲ್ಲ, ಬದಲಿಗೆ ವಿದ್ಯಾದೇವರೆನಿಸಿದ ಗಣಪತಿಯ ಹತ್ತಿರ ಹೇಳುತ್ತಾ ಬರೆಸಿದರು. ವ್ಯಾಸ ಮಹರ್ಷಿಗಳ ಮೂಲ ಹೆಸರು ಕೃಷ್ಣದ್ವೆöÊಪಾಯನ ಎಂದಾಗಿದ್ದು, ಕೃಷ್ಣನೇ ಅವರಲ್ಲಿ ಪ್ರವಹಿಸಿ ಮಹಾಭಾರತವನ್ನು ಸೃಜಿಸಿದ ಎಂಬ ನಂಬಿಕೆ ಇದೆ ಎಂದರು.
ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸಲು ಬಯಸುವ, ಭಾರತೀಯ ಜ್ಞಾನವನ್ನು ಒಪ್ಪದ ಕೆಲವು ವಿದೇಶಿ ಮನಸ್ಥಿತಿಗಳು ಭಗವದ್ಗೀತೆಯ ಕುರಿತು ಇಲ್ಲಸಲ್ಲದ ಪೂರ್ವಾಗ್ರಹಗಳನ್ನು ತೇಲಿಬಿಟ್ಟು ಗೊಂದಲ ಸೃಷ್ಟಿಸುತ್ತಿದ್ದು, ಶ್ರೀಕೃಷ್ಣನಲ್ಲಿ ಪರಿಪೂರ್ಣ ನಂಬಿಕೆ ಇಲ್ಲದೇ ಸಂದೇಹಪೂರ್ವಕವಾಗಿ ಭಗವದ್ಗೀತೆ ಸಾರ ತಿಳಿಯಲು ಅಸಾಧ್ಯ ಎಂದರು.
ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ.ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ.ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು. ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿದರು.