ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ವ್ಯಾಪಾರಸ್ಥರ ಮತ್ತು ಕೈಗಾರಿಕೋದ್ಯಮಿಗಳ ಹಿತವನ್ನು ಕಾಪಾಡುವದರೊಂದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವದ ಕಾಯ್ದೆ ಕಾನೂನುಗಳ ಬಗ್ಗೆ ಮಾಹಿತಿ, ಪ್ರೋತ್ಸಾಹ ನೀಡುವ ಸಂಸ್ಥೆಯಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜೇಂದ್ರ ಎಸ್.ಗಡಾದ ಅಭಿಪ್ರಾಯಪಟ್ಟರು.
ಶುಕ್ರವಾರ ಸಂಸ್ಥೆಯ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾಭವನದಲ್ಲಿ ಲಿಂ. ಸುರೇಶ ಸೋಮಯ್ಯ ಶಾಬಾದಿಮಠ, ಲಿಂ. ಈಶ್ವರಪ್ಪ ಮಲ್ಲಿಕಾರ್ಜುನ ಬೇಲೇರಿ, ಲಿಂ. ಪಶುಪತಯ್ಯ ಎಸ್. ಶಾಬಾದಿಮಠ, ಲಿಂ. ಚಂದ್ರಶೇಖರಪ್ಪ ಐ.ಮುನವಳ್ಳಿ, ಲಿಂ. ಕುಂದನಮಲ್ ಧನರಾಜ್ ಶಹಾ ಇವರುಗಳ ಸ್ಮಾರಕ ದತ್ತಿ ಉಪನ್ಯಾಸದ ನಿಮಿತ್ತ ಹಮ್ಮಿಕೊಂಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟçದಲ್ಲಿ ಆಹಾರ ವಸ್ತುಗಳಿಗೆ ಸಂಬಂಧಿಸಿದಂತೆ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಅದರಡಿ ರಚಿಸಲಾಗಿರುವ ನಿಯಮಗಳು-2011 ಮತ್ತು ನಿಬಂಧನೆಗಳು 5ನೇ ಅಗಸ್ಟ್ 2011ರಿಂದ ಜಾರಿಗೆ ಬಂದಿವೆ. ಈ ಕಾಯ್ದೆಯಡಿಯಲ್ಲಿ ಜನರಿಗೆ ಬೇಕಾಗಿರುವ ಪದಾರ್ಥಗಳು ಗುಣಮಟ್ಟದಾಗಿರಬೇಕು ಮತ್ತು ಕಲಬೆರಕೆಯಾಗಬಾರದು ಎಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಪರವಾನಿಗೆಯನ್ನು ಆಹಾರ ವಸ್ತುಗಳ ತಯಾರಕರು/ಸಂಸ್ಕರಣೆ/ ಸಾಗಣೆ/ ವಿತರಣೆ /ಪ್ಯಾಕಿಂಗ್, ಸಣ್ಣ- ಅತೀ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮತ್ತು ಮಾರಾಟದಲ್ಲಿ ನಿರತರಾಗಿರುವವರು ನೋಂದಣಿ / ಪರವಾನಗಿ ಪಡೆದಿರಬೇಕು ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಇಂಡಸ್ಟ್ರಿಯಲ್ ಉಪ ಸಮಿತಿ ಚೇರಮನ್ ಮದುಸೂಧನ ಡಿ.ಪುಣೇಕರ ಸ್ವಾಗತಿಸಿದರು. ಲಿಂಗೈಕ್ಯರಾದ ಮಹನೀಯರ ಪರಿಚಯವನ್ನು ಸಂಸ್ಥೆಯ ದತ್ತಿ ಉಪನ್ಯಾಸ ಉಪ ಸಮಿತಿ ಚೇರಮನ್ ಚಂದ್ರು ಬಾಳಿಹಳ್ಳಿಮಠ ಮಾಡಿದರು. ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಗದಗ-ಬೆಟಗೇರಿ ಅವಳಿ ನಗರದ ಸಂಘ-ಸಂಸ್ಥೆಗಳ ಸದಸ್ಯರು, ಗದಗ ಜಿಲ್ಲೆಯ ತಾಲೂಕುಗಳಿಂದ ಆಗಮಿಸಿದ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಮಾತನಾಡುತ್ತಾ, ತಮ್ಮ ತಮ್ಮ ಘಟಕಗಳಿಗೆ ಕಾಯಿದೆಗೆ ಅನುಗುಣವಾಗಿ ನೋಂದಣಿ/ ಪರವಾನಗಿ ಮಾಡಿಸಬೇಕು. ಘಟಕದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳುವುದು ಅತೀ ಅವಶ್ಯವಾಗಿದೆ. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಘಟಕದ ಪರಸರದ ಶುಚಿತ್ವ, ತ್ಯಾಜ್ಯ ವಸ್ತುಗಳ ಸಂಗ್ರಹ ವಿಲೇವಾರಿಗೆ ವಿಶೇಷ ಗಮನ ನೀಡುವುದು ಅತೀ ಅವಶ್ಯವಾಗಿದೆ. ಜೊತೆಗೆ ಪ್ರತಿ ವರ್ಷ ವಾರ್ಷಿಕ ವರದಿಯನ್ನು ಇಲಾಖೆಗೆ ನೀಡಿ ನವೀಕರಣ ಮಾಡಬೇಕು ಮತ್ತು ಪರವಾನಿಗೆ ಇಲ್ಲದವರು ಕೂಡಾ ಪರವಾನಿಗೆ ಪಡೆದುಕೊಳ್ಳಬೇಕೆಂದು ತಿಳಿಸಿದರು.