ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜ್ಞಾನವು ಸಾಗರದಾಚೆಗಿನ ಪಾಶ್ಚಾತ್ಯರ ಗಮನ ಸೆಳೆದಿದೆ. ಅದರಲ್ಲೂ ಭಗವದ್ಗೀತೆಯು ಪಾಶ್ಚಾತ್ಯರ ಮನಗೆದ್ದ ಮಹಾ ಗ್ರಂಥವಾಗಿದೆ ಎಂದು ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 12ನೇ ದಿನ ಪ್ರವಚನ ನೀಡಿ ಮಾತನಾಡಿ, ರಾಮಾಯಣ, ಭಗವದ್ಗೀತೆ ಹಾಗೂ ಶಂಕರಾಚಾರ್ಯರ ಅದ್ವೆöÊತ ಸಿದ್ಧಾಂತಗಳು ಪಾಶ್ಚಾತ್ಯರನ್ನು ಚಕಿತರನ್ನಾಗಿಸಿದ ಭಾರತೀಯ ಜ್ಞಾನಗಳಾಗಿವೆ. ಭಾರತಕ್ಕೆ ಭೇಟಿ ನೀಡಿದ ವಿದೇಶಿಗರಿಗೆ ನೆನಪಿನ ಕಾಣಿಕೆಯಾಗಿ ತಾಜ್ಮಹಲ್ನ್ನು ನೀಡುವ ಪದ್ಧತಿ ಇತ್ತು. ಆದರೆ ಇತ್ತೀಚೆಗೆ ಭಗವದ್ಗೀತೆಯನ್ನು ಕಾಣಿಕೆಯಾಗಿ ನೀಡುವ ಅಭ್ಯಾಸ ಆರಂಭವಾಗಿರುವುದು ಶ್ಲಾಘನೀಯ ಎಂದರು.
ತಪಸ್ಸು ಮಾಡಿದರೆ ಮಾತ್ರ ದೇವನೊಲುಮೆ ಸಾಧ್ಯವಿದ್ದು, ಅಚಲ ನಂಬಿಕೆ ಹಾಗೂ ಶ್ರದ್ಧೆಯಿಂದ ದೇವರನ್ನು ಒಲಿಸಿಕೊಂಡು ಅದ್ಭುತಗಳನ್ನು ಸೃಷ್ಟಿಸಿದ ಅನೇಕ ನಿದರ್ಶನಗಳು ನಮ್ಮ ಕಣ್ಮುಂದೆ ಇದೆ. ರಾಮಾಯಣದಲ್ಲಿ ಶ್ರೀರಾಮರ ಕಥೆ ಅಮೋಘ, ನಾವೆಲ್ಲ ರಾಮನನ್ನು ಆರಾಧನೆ ಮಾಡುತ್ತೇವೆ. ಆದರೆ ಅವರಂತೆ ಆದರ್ಶ ಪುರುಷರಾಗುವುದು ಕಷ್ಟಸಾಧ್ಯ. ಕೇವಲ ಹಿಂದೂಗಳಷ್ಟೇ ಅಲ್ಲದೇ ಖಾದರ್ ಎನ್ನುವಂಥ ಮುಸ್ಲಿಂ ವ್ಯಕ್ತಿಯೋರ್ವರು ರಾಮಾಯಣವನ್ನು ಉರ್ದುಗೆ ಅನುವಾದ ಮಾಡಿದ್ದಾರೆ ಎಂದು ತಿಳಿಸಿದರು.
ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಎಸ್.ಎಸ್. ಶೆಟ್ಟರ್, ಡಾ.ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.