ವಿಜಯಸಾಕ್ಷಿ ಸುದ್ದಿ, ಗದಗ: ಜನರು ಕೆಲ ತಪ್ಪು ತಿಳುವಳಿಕೆಯಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟು ಇಡೀ ವ್ಯವಸ್ಥೆಯೇ ಹಾಳುಗುವ ಭೀತಿ ಎದುರಾಗುತ್ತಿದೆ. ಇಂತಹ ಜನರಿಗೆ ಜಾಗೃತಿ ಮೂಡಿಸಿದರೆ ತಪ್ಪು ತಿಳುವಳಿಕೆ ಹೋಗಲಾಡಿಸಲು ಸಾಧ್ಯ. ಈ ಜಾಗೃತಿಯಲ್ಲಿ ನಾಟಕ ಮಾಧ್ಯಮ ಅತ್ಯಂತ ಪರಿಣಾಮಕಾರಿ ಎಂದು ಗದಗ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಅಭಿಪ್ರಾಯಪಟ್ಟರು.
ಇಲ್ಲಿನ ಪಂಡಿತ ಪಂಚಾಕ್ಷರ ಗವಾಯಿಗಳರವರ ಕಲಾ ಮಹಾವಿದ್ಯಾಲಯದಲ್ಲಿ ಯುಥ್ ರೆಡಕ್ರಾಸ್, ಎನ್ಎಸ್ಎಸ್ ಘಟಕಗಳ ಹಾಗೂ ಗದಗ ಜಿಲ್ಲಾ ಆರೋಗ್ಯ ಇಲಾಖೆ ಸಂಯೋಗದಲ್ಲಿ ಏಡ್ಸ್ ಜಾಗೃತಿ ಅಭಿಯಾನ ಹಾಗೂ ಬೀದಿನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಏಡ್ಸ್ ನಮ್ಮ ದೇಶದಲ್ಲಿ ಮೂರು ದಶಕಗಳಿಂದ ಕಂಡು ಬಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅದರ ನಿಯಂತ್ರಣಕ್ಕೆ ಎಷ್ಟೇ ಕ್ರಮಗಳನ್ನು ಜಾರಿಗೊಳಿಸಿದರೂ ಇನ್ನೂ ಹರಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂದು ಈ ಮಹಾವಿದ್ಯಾಲಯದ ಎನ್ಎಸ್ಎಸ್ ಹಾಗೂ ಯುಥ್ ರೆಡ್ಕ್ರಾಸ್ ಸ್ವಯಂ ಸೇವಕರು ಬೀದಿ ನಾಟಕ ಪ್ರದರ್ಶಿಸುವುದರ ಮೂಲಕ ಜಾಗೃತಿ ಮೂಡಿಸುತ್ತಿರುವುದು ನಮ್ಮ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ರೆಡ್ಕ್ರಾಸ್ ಘಟಕದ ಅಧಿಕಾರಿ ಡಾ. ವಿ.ಎ. ನಿಂಗೋಜಿ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾ. ಆರ್.ಎಸ್. ದಾನರಡ್ಡಿ ವಹಿಸಿದ್ದರು. ಎನ್.ಎಸ್.ಎಸ್. ಅಧಿಕಾರಿ ಪ್ರೊ. ಎಂ.ಎನ್. ಹೊಂಬಾಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
- ನAತರ ವಿರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಸ್ವಯಂಸೇವಕರು ಬೀದಿ ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ಈ ಬೀದಿ ನಾಟಕದ ಸಂಯೋಜಕರಾದ ಡಾ. ವ್ಹಿ.ಎ. ನಿಂಗೋಜಿ, ಪ್ರೊ. ಎಂ.ಎನ್. ಹೊಂಬಾಳಿ, ಸುಭಾಸ ಓಂಕಾರ, ಬಸವರಾಜ ಕುಂಬಾರ, ವ್ಹಿ.ಎಸ್. ಹೊಸಮಠ, ಬೀದಿ ನಾಟಕದ ಪಾತ್ರಧಾರಿಗಳಾದ ರಾಜಶೇಖರ, ದೇವ, ಪ್ರಶಾಂತ, ಪವಿತ್ರಾ ಗೊಡಚಿ, ಸಂಗೀತ ನಿರ್ದೇಶನ ನೀಡಿದ ಜಗನ್ನಾಥ ಹಾಗೂ ಪಿಪಿಜಿ ಕಲಾ ಮಹಾವಿದ್ಯಾಲಯ ಪ್ರಾಚಾರ್ಯರಿಗೆ, ಸಿಬ್ಬಂದಿ ವರ್ಗಕ್ಕೆ ಗದಗ ಜಿಲ್ಲಾ ಡೆಪ್ಯೂಟಿ ಆರೋಗ್ಯ ಅಧಿಕಾರಿ ಬಸವರಾಜ ಲಾಳಗಟ್ಟಿ ಇಲಾಖೆಯ ಪರವಾಗಿ ಕೃತಜ್ಞತೆ ತಿಳಿಸಿದರು.