ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪುರಾತನ ಸ್ಮಾರಕಗಳು ನಮ್ಮ ಸಂಸ್ಕೃತಿ, ಇತಿಹಾಸವನ್ನು ಸಾರುವ ಹೆಗ್ಗುರುತುಗಳಾಗಿದ್ದು, ಅವುಗಳನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಅಭಿಮತ ವ್ಯಕ್ತಪಡಿಸಿದರು.
ಅವರು ಲಕ್ಮೇಶ್ವರದ ಪುರಾತನ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಶಿರಹಟ್ಟಿ ಹಾಗೂ ಲಕ್ಮೇಶ್ವರ ತಾಲೂಕುಗಳ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪುರಾತನ ಸ್ಮಾರಕಗಳು ನಮ್ಮ ಹಿರಿಯರ ಸಾಧನೆಗಳ ಹೆಜ್ಜೆ ಗುರುತುಗಳು. ಪುರಾತನ ಪ್ರಜ್ಞೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮವೇ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದ ಉದ್ದೇಶವಾಗಿದೆ. ಡಾ. ಸುಧಾಮೂರ್ತಿಯವರು ಪಟ್ಟಣದ ಈ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಳಿಸಿರುವದರಿಂದ ಅನೇಕ ಮಹತ್ವದ ವಿಷಯಗಳು ತಿಳಿಯುವಂತಾಯಿತು. ಪುರಾತನ ಸ್ಮಾರಕಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿವೆ. ಅವುಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದು ಕರೆ ನೀಡಿದರು.
ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಕೋಶಾಧ್ಯಕ್ಷ ಚೆನ್ನಪ್ಪ ಜಗಲಿ ಮಾತನಾಡಿ, ನಮ್ಮ ಹಿರಿಯರ ಸಂಸ್ಕೃತಿ-ಸAಪ್ರದಾಯಗಳನ್ನು ಆಧುನಿಕತೆಯ ನೆಪದಲ್ಲಿ ದೂರ ಇಡುತ್ತಿದ್ದೇವೆ. ಇದು ಸೂಕ್ತವಲ್ಲ. ನಮ್ಮ ಸಂಸ್ಕೃತಿಗಳನ್ನು ನಾವು ಮರೆಯಬಾರದು. ಸೋಮೇಶ್ವರ ದೇವಸ್ಥಾನ ಸಹಸ್ರ ವರ್ಷಗಳಿಂದ ನಮ್ಮ ಪರಂಪರೆಗೆ ಸಾಕ್ಷಿಯಾಗಿ ನಿಂತಿದೆ ಎಂದರು.
ಪುರಸಭಾ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೋಮೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ ಮಾತನಾಡಿದರು. ಪುರಸಭಾ ಸದಸ್ಯರಾದ ಶೋಭಾ ಮೆಣಸಿನಕಾಯಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ವೈ.ಬಿ. ಜಿಗಳೂರ, ಬಿ.ಸಿ. ಪಟ್ಟೇದ, ಎಲ್.ಎ. ನಡುವಿನಮನಿ, ಸುರೇಶ ರಾಚನಾಯ್ಕರ, ಬಸವರಾಜ ಮೆಣಸಿನಕಾಯಿ, ಜಿ.ಎಸ್. ಗುಡಗೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ತಾಲೂಕಾ ನೋಡಲ್ ಅಧಿಕಾರಿ ಈಶ್ವರ ಮಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಗೊಜನೂರಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಜಿ.ಎಸ್. ಗುಡಗೇರಿ ವಂದಿಸಿದರು. ಲಕ್ಮೇಶ್ವರ ಉತ್ತರ ವಲಯದ ಸಿ.ಆರ್.ಪಿ ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು.