ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿಯ ಪ್ರತಿಭೆಗಳನ್ನು ಹುಡುಕಿ ತೆಗೆದು ಅವರಿಗೆ ಉತ್ತಮ ವೇದಿಕೆ ಸೃಷ್ಟಿಸಿ ಅವಕಾಶ ಕಲ್ಪಿಸುವ ಕಾರ್ಯದೊಂದಿಗೆ ಜನಪದ ಅಕಾಡೆಮಿ ಮಾಡುವ ಕಾರ್ಯವನ್ನು ಶ್ರೀ ಬೀರೇಶ್ವರ ಕಾರ್ತಿಕೋತ್ಸವ ಸಮಿತಿ ಮಾಡುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ವಾಲೀಕಾರ ಹೇಳಿದರು.
ಅವರು ಬುಧವಾರ ರಾತ್ರಿ ಶಿರಹಟ್ಟಿಯ ಶ್ರೀ ಬೀರೇಶ್ವರ ಸೇವಾ ಸಮಿತಿ ವತಿಯಿಂದ ಜರುಗಿದ ಶ್ರೀ ಬೀರೇಶ್ವರ ಕಾರ್ತಿಕೋತ್ಸವ ಪ್ರಯುಕ್ತ 19ನೇ ವರ್ಷದ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಹಾಗೂ ಯುವ ಸಂಭ್ರಮ ಜನಪದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜನಪದ ಸಂಸ್ಕೃತಿ, ಕಲೆ, ಸಾಹಿತ್ಯ ಗ್ರಾಮೀಣ ಸಂಸ್ಕೃತಿಯ ಜೀವಾಳವಾಗಿದ್ದು, ಬಾಯಿಂದ ಬಾಯಿಗೆ ಹರಡಿ ಜನರ ಬದುಕಿನ ಅಂಗವಾಗಿ ಮನುಷ್ಯನ ಹೃದಯ ಸಾಮ್ರಾಜ್ಯ ಅಳಿಸುವಂತಿದೆ. ಕನ್ನಡ ನಾಡಿನ ಜನಪದ ಕಲೆ ಹಾಗೂ ಸಾಹಿತ್ಯ ಸಾರಸ್ವತ ಪ್ರಪಂಚದ ಅಪೂರ್ವ ನಿಧಿಗಳು. ಜನಪದ ಬರೆದ ಸಾಹಿತ್ಯವಾಗಿರದೇ ಬಾಯಿಂದ ಬಾಯಿಗೆ ಹರಡಿ ಜನಮನ್ನಣೆ ಪಡೆದಿದೆ. ಹಳೆಯ ತಲೆಮಾರಿನ ಪರಂಪರೆಯನ್ನು ಹೊಸ ತಲೆಮಾರಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ಪಟ್ಟಣದ ಬೀರೇಶ್ವರ ಸೇವಾ ಸಮಿತಿಯವರು ಕಳೆದ 19 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಜನಪದ ಕಲೆ ಅನಾವರಣ ಕೆಲಸ ಅತ್ಯಂತ ಶ್ಲಾಘನೀಯ ಎಂದರು.
ಪ.ಪಂ ಸದಸ್ಯ ಮಂಜುನಾಥ ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ಹಾರೋಗೇರಿ, ಗೂಳಪ್ಪ ಕರಿಗಾರ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಯುವ ಕಲಾವಿದರಿಂದ ಅಹೋರಾತ್ರಿ ಜನಪದ ಸಿರಿ ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಜಾತ ದೊಡ್ಡಮನಿ ನೆರವೇರಿಸಿದರು. ಪ.ಪಂ ಸದಸ್ಯ ಮಂಜುನಾಥ ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ಹಾರೋಗೇರಿ, ಗೂಳಪ್ಪ ಕರಿಗಾರ ಕಾರ್ಯಕ್ರಮ ನಿರ್ವಹಿಸಿದರು.
ಮಂಜುನಾಥ ಹಮ್ಮಿಗಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಪ.ಪಂ ಸದಸ್ಯ ಹೊನ್ನಪ್ಪ ಶಿರಹಟ್ಟಿ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿದರು. ಪಿಎಸ್ಐ ಸಿ.ಎಸ್. ದೇವೂರ, ದೇವಪ್ಪ ಬಟ್ಟೂರ, ಸೋಮನಗೌಡ ಮರಿಗೌಡ್ರ, ಯಲ್ಲಪ್ಪ ಸೂರಣಗಿ, ನಾರಾಯಣ ಬದಿ, ಆನಂದ ಮಾಳೆಕೊಪ್ಪ, ಗಂಗಮ್ಮ ಗುಬ್ಬಿ, ಬಾಗಪ್ಪ ವಗ್ಗರ, ಮಲ್ಲೇಶ ಹುಯಿಲಗೋಳ, ವಿ.ಪಿ. ಮಠಪತಿ, ನಿಂಗಪ್ಪ ಗುಡ್ಡದ ಮುಂತಾದವರು ಉಪಸ್ಥಿತರಿದ್ದರು.
- ಇದೇ ವೇಳೆ ಬೀರೇಶ್ವರ ಸೇವಾ ಸಮಿತಿಯಿಂದ `ಪರಿಶ್ರಮ ನಕ್ಷತ್ರ’ ಪ್ರಶಸ್ತಿಯನ್ನು ಪ್ರಸಿದ್ಧ ಡೊಳ್ಳಿನ ಕಲಾವಿದ ನಿಂಗಪ್ಪ ಗುಡ್ಡದ ಹಾಗೂ `ಯುವರತ್ನ’ ಪ್ರಶಸ್ತಿಯನ್ನು ಮಜ್ಜೂರ ತಾಂಡೆಯ ಸರಿಗಮನಪ ರನ್ನರ್ಅಪ್ ರಮೇಶ ಲಮಾಣಿ ಅವರಿಗೆ ನೀಡಿ ಗೌರವಿಸಲಾಯಿತು.