ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮನಾಮ ಜಪದ ಮೂಲಕ ಜೀವನ್ಮುಕ್ತಿಯನ್ನು ಪಡೆಯಬಹುದು ಎಂಬುದನ್ನು ಸಾಧಿಸಿ ತೋರಿದವರು ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಮತ್ತು ಸದ್ಗುರು ಶ್ರೀ ಬ್ರಹ್ಮಾನಂದರು. ಮಹಾರಾಷ್ಟçದ ಗೋಂದಾವಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಅವರು ಕರ್ನಾಟಕದಲ್ಲಿಯೂ ಸಹ ರಾಮನಾಮ ಜಪದ ಪ್ರಸರಣೆಯನ್ನು ಮಾಡಿದರು.
1909ರ ಎಪ್ರಿಲ್ 1ರಂದು ಹೆಬ್ಬಳ್ಳಿಗೆ ಆಗಮಿಸಿದ್ದ ಶ್ರೀ ಬ್ರಹ್ಮಚೈತನ್ಯರು ಅಲ್ಲಿ ತಮ್ಮ ಸ್ಥಿರ ಪಾದುಕೆಗಳನ್ನು ಸ್ಥಾಪಿಸಿ, ಮುಂದೊಂದು ದಿನ ಇದು ಮಹಾನ್ ಕ್ಷೇತ್ರವಾಗಲಿದೆ ಎಂದು ನುಡಿದಿದ್ದರು. ಅವರ ಮಾತು ಇಂದಿಗೆ ಸತ್ಯವಾಗಿದ್ದು, ಶ್ರೀ ದತ್ತಾವಧೂತ ಮಹಾರಾಜರು ಅದನ್ನು ಚೈತನ್ಯಾಶ್ರಮವೆಂದು ಶೃದ್ಧಾ ಕೇಂದ್ರವನ್ನಾಗಿಸಿದ್ದಾರೆ.
ರಾಮನಾಮದ ಪ್ರಸರಣೆಯ ಜೊತೆಗೆ ರಾಮನ ಬಂಟ ಹನುಮಂತನ ಹನುಮಾನ್ ಚಾಲೀಸಾ ಪಠಣೆಯನ್ನೂ ಸಹ ಪ್ರಸಾರ ಮಾಡುವ ಮೂಲಕ ಶ್ರೀ ದತ್ತಾವಧೂತ ಮಹಾರಾಜರು ತಮ್ಮ ಗುರುಗಳ ಕಾರ್ಯವನ್ನು ಮುಂದುವರೆಸಿದ್ದಾರೆ. ಈಗಾಗಲೇಹೆಬ್ಬಳ್ಳಿ, ಹುಬ್ಬಳ್ಳಿ, ಬೆಂಗಳೂರು, ಸೂಡಿ ಮುಂತಾದೆಡೆಗಳಲ್ಲಿ ಹನುಮಾನ್ ಚಾಲೀಸಾ ನಡೆದಿದ್ದು, ಡಿ. ೮ರಂದು ನರೇಗಲ್ಲದಲಿ ನಡೆಯಲಿದೆ.
ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ಹೆಬ್ಬಳ್ಳಿಗೆ ಕರೆತರಲು ಹೆಬ್ಬಳ್ಳಿಯ ವೆಂಕನಗೌಡ ನಾಡಿಗೇರರು ಕುಸಗಲ್ಲಿನಿಂದ 100 ಚಕ್ಕಡಿಗಳನ್ನು ವ್ಯವಸ್ಥೆ ಮಾಡಿ ಹೆಬ್ಬಳ್ಳಿಗೆ ಕರೆದುಕೊಂಡು ಬಂದಿದ್ದರು. 1984ರ ಜನೇವರಿ 26ರಂದು ಗುರುಗಳ ಅಪ್ಪಣೆಯಂತೆ ಹೆಬ್ಬಳ್ಳಿಗೆ ಆಗಮಿಸಿದ ಶ್ರೀ ದತ್ತಾವಧೂತರು, ಅಷ್ಟೇ ಶೃದ್ಧಾಭಕ್ತಿಗಳಿಂದ ಚೈತನ್ಯಾಶ್ರಮವನ್ನು ಸರ್ವ ಭಕ್ತರ ಸಹಾಯ ಸಹಕಾರದೊಂದಿಗೆ ಬೃಹತ್ ಪ್ರಮಾಣದಲ್ಲಿ ಕಟ್ಟಿ ಬೆಳೆಸಿದ್ದಾರೆ.
ಜಗತ್ತಿನ ಬಹುತೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿರುವ ನನಗೆ ಇಲ್ಲಿ ಸಿಕ್ಕಷ್ಟು ಆನಂದ, ಸಮಾಧಾನ ಬೇರೆಲ್ಲೂ ಸಿಕ್ಕಿಲ್ಲ ಎಂದು ಇನ್ಫೋಸಿಸ್ನ ಡಾ. ಸುಧಾಮೂರ್ತಿಯವರು ಶ್ರೀ ಚೈತನ್ಯಾಶ್ರಮದ ಬಗ್ಗೆ ಹೇಳಿದ್ದಾರೆ.
ಗದಗ ಜಿಲ್ಲೆಯಲ್ಲಿ ನರೇಗಲ್ಲದ ಶ್ರೀ ದತ್ತಾತ್ರೇಯ ಅತ್ಯಂತ ಜಾಗೃತ ಭಗವಂತನೆನಿಸಿದ್ದಾನೆ. ಅವನನ್ನು ಸ್ಮರಿಸಿ ಯಾವುದೇ ಕಾರ್ಯವನ್ನು ಹಮ್ಮಿಕೊಂಡರೂ ಅದು ಸಂಪೂರ್ಣವಾಗಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ 2007ರಲ್ಲಿ ನಡೆದ ಶ್ರೀ ಸಹಸ್ರ ಚಂಡಿಕಾ ಮಹಾಯಾಗ, ಶ್ರೀ ದತ್ತಾತ್ರೇಯ ದೇವಸ್ಥಾನದ ಶತಮಾನೋತ್ಸವ, ಮತ್ತಿತರ ಧಾರ್ಮಿಕ ಕಾರ್ಯಗಳೇ ಸಾಕ್ಷಿಯಾಗಿವೆ. ಹೀಗಾಗಿ ನರೇಗಲ್ಲ, ಶ್ರೀ ದತ್ತಾತ್ರೇಯನ ಒಂದು ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿದ್ದು, ಡಿ.6ರಿಂದ ಎಲ್ಲ ಕಾರ್ಯಗಳು ಪ್ರಾರಂಭವಾಗಲಿವೆ.
- ಕಳೆದ ನಾಲ್ಕು ದಶಕಗಳಿಂದ ತಮ್ಮ ನಿತ್ಯದ ಕಾಯಕದೊಂದಿಗೆ ಅನೇಕ ಧಾರ್ಮಿಕ ಗ್ರಂಥಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ದತ್ತಾವಧೂತ ಮಹಾರಾಜರು 13 ಕೋಟಿ ಹನುಮಾನ್ ಚಾಲೀಸಾ ಪಠಣೆಯ ಸಂಕಲ್ಪ ಮಾಡಿದ್ದಾರೆ. ತನ್ನಿಮಿತ್ತ ಡಿ. 6ರ ಸಂಜೆ ನರೇಗಲ್ಲದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸಲಿರುವ ಪೂಜ್ಯರು ಡಿ. 7ರಂದು ಶ್ರೀ ದತ್ತಯಾಗ ಮತ್ತು ಡಿ. 8ರಂದು 13 ತಾಸುಗಳ ಅಖಂಡ ಹನುಮಾನ್ ಚಾಲೀಸಾ ಪಠಣದಲ್ಲಿ ಪಾಲ್ಗೊಂಡು ಭಕ್ತರೆಲ್ಲರನ್ನೂ ಅನುಗ್ರಹಿಸಲಿದ್ದಾರೆ.