ವಿಜಯಸಾಕ್ಷಿ ಸುದ್ದಿ, ಗದಗ: ಭಗವಂತನ ಕಾರುಣ್ಯ, ಅನುಗ್ರಹವಿದ್ದಲ್ಲಿ ನಾಸ್ತಿಕನೂ ಆಸ್ತಿಕನಾಗಬಲ್ಲ ಎನ್ನುವುದನ್ನು ಭಗವಂತ ಸಾಕ್ಷಾತ್ಕರಿಸಿದ್ದಾನೆ. ಇಂದು ರಘುನಾಥತೀರ್ಥ ಶ್ರೀಗಳ ಆರಾಧನೆಯ ಪುಣ್ಯದಿನವಾಗಿದೆ ಎಂದು ಶ್ರೀ ಮನ್ಮದ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ಮದುತ್ತರಾದಿಮಠಾಧೀಶರಾದ ಪೂಜ್ಯ ಶ್ರೀಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರು ಗದಗ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಮೃತೋಪದೇಶ ನೀಡಿ ಮಾತನಾಡಿದರು.
ರಘುನಾಥತೀರ್ಥ ಶ್ರೀಗಳು ಒಂದು ಬಾರಿ ಭಗವಂತನ ಜ್ಞಾನದಲ್ಲಿ ಮಗ್ನರಾಗಿದ್ದ ವೇಳೆ ಮಹಿಳೆಯೋರ್ವಳು ಆಗಮಿಸಿ ಗುರುಗಳಿಗೆ ಭಕ್ತಿಭಾವದಿಂದ ವಂದಿಸಿದಾಗ ಭಗವಂತನ ಜ್ಞಾನದಲ್ಲಿ ಮುಳುಗಿದ್ದ ಶ್ರೀಗಳಿಗೆ ಅವರ ಶಿಷ್ಯಂದಿರು ಮಹಿಳೆಯೋರ್ವಳು ನಿಮ್ಮ ದರ್ಶನಕ್ಕೆ ಬಂದು ಕೈಮುಗಿದು ನಿಂತಿದ್ದಾಳೆ ಎಂದು ಹೇಳುತ್ತಿದ್ದಂತೆಯೇ ಶ್ರೀಗಳ ಬಾಯಿಂದ ಹೊರಬಂದ ಮಾತು, ಅಷ್ಟಪುತ್ರೆಭವ ಎಂದು. ಆದರೆ ಆ ಸಂದರ್ಭದಲ್ಲಿ ಆ ಮಹಿಳೆಯ ಪತಿ ಮೃತನಾಗಿದ್ದು, ಆ ಬೇಸರದಲ್ಲಿ ತಾನೂ ಸಹ ಸತಿ ಸಹಗಮನ ಹೋಗಲು ನಿರ್ಧರಿಸಿ ಶ್ರೀಗಳ ಬಳಿ ಬಂದಿದ್ದಳು.
ಈ ವಿಷಯವನ್ನು ಕಣ್ಣುಮುಚ್ಚಿ ಧ್ಯಾನದಲ್ಲಿ ಮಗ್ನರಾಗಿದ್ದ ಶ್ರೀಗಳ ಗಮನಕ್ಕೆ ತಂದಾಗ ಗಂಡ ಮೃತನಾಗಿ ಶವ ಸ್ಮಶಾನದಲ್ಲಿದ್ದಾಗ ಅಷ್ಟಪುತ್ರರನ್ನು ಹೆರುವುದು ಹೇಗೆ ಎಂಬ ಚಿಂತೆ ಮಹಿಳೆ ಮತ್ತು ಶಿಷ್ಯರಲ್ಲಿ ಮೂಡಿ ಆಶ್ಚರ್ಯಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಆ ಮಾತನ್ನು ನಾನು ಮಾತನಾಡಿಲ್ಲ. ನನ್ನಿಂದ ಭಗವಂತ ಮೂಲರಾಮ ದಿಗ್ವಿಜಯ ದೇವರು ಮಾತನಾಡಿಸಿದ್ದಾರೆ ಎಂದು ಹೇಳಿದ್ದು, ನಂತರ ಆಕೆಯ ಮೃತ ಪತಿ ಚಿತೆ ಮೇಲಿಂದ ಎದ್ದು ವಾಪಸ್ ಮನೆಗೆ ಬಂದು ಅಷ್ಟಪುತ್ರರನ್ನು ಪಡೆದಿದ್ದು ಮಹಿಮೆಯಾಗಿದೆ ಎಂದರು.
ಬೆಳಿಗ್ಗೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀಗಳ ಪಾದಪೂಜೆ ಹಾಗೂ ತಪ್ತ ಮುದ್ರಾಧಾರಣೆ, ಶ್ರೀ ಮೂಲರಾಮ ದಿಗ್ವಿಜಯ ದೇವರ ಪ್ರಜೆ, ಸಂಜೆ ವಿದ್ವಾಂಸರಿAದ ಉಪನ್ಯಾಸ ಜರುಗಿತು.
ಕಲಿಯುಗದಲ್ಲಿ ಭಕ್ತರ ಮಾತನ್ನು ಭಗವಂತ ಸತ್ಯ ಮಾಡುತ್ತಾನೆ ಎನ್ನುವುದಕ್ಕೆ ಮೃತ ವ್ಯಕ್ತಿಗೆ ಜೀವತುಂಬಿ ರಘುನಾಥ ತೀರ್ಥರ ಮಾತನ್ನು ಸತ್ಯ ಮಾಡುವ ಮೂಲಕ ಮೂಲರಾಮ ದೇವರು ಭಗವಂತನ ಕೃಪೆ ಅನುಗ್ರಹದಿಂದ ಭಕ್ತರ ಉದ್ಧಾರ ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ ಎಂದು ಶ್ರೀಗಳು ತಿಳಿಸಿದರು.