ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಹೋಬಳಿಯಲ್ಲಿ ಸೋಮವಾರ ಎಳ್ಳ ಅಮವಾಸ್ಯೆಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಹೊಲಕ್ಕೆ ಚರಗ ಚೆಲ್ಲುವ ಮೂಲಕ ರೈತಾಪಿ ಜನರು ತಮ್ಮ ಸ್ನೇಹಿತರು, ಬಂಧು ಮಿತ್ರರೊಂದಿಗೆ ಹೊಲಕ್ಕೆ ತರಳಿ ಸುಗ್ರಾಸ ಭೋಜನವನ್ನು ಉಂಡು ನಲಿದರು.
ಹೊಲದಲ್ಲಿನ ಬನ್ನಿ ಗಿಡಕ್ಕೆ ಪೂಜೆ ನೆರವೇರಿಸಿ, ತಾವು ಮಾಡಿದ ವಿವಿಧ ಬಗೆಯ ಅಡುಗೆಯನ್ನು ಹೊಲದ ತುಂಬೆಲ್ಲ ಅಡ್ಡಾಡಿ ಭೂಮಾತೆಗೆ ಅರ್ಪಿಸುವುದಕ್ಕೆ ಚರಗ ಎನ್ನುತ್ತಾರೆ. ಇದರಿಂದ ಭೂಮಿತಾಯಿ ಹುಲುಸಾಗಿ ಬೆಳೆದು ತಮಗೆ ಉತ್ತಮ ದವಸ-ಧಾನ್ಯಗಳನ್ನು ನೀಡುತ್ತಾಳೆ ಎನ್ನುವ ಬಲವಾದ ನಂಬುಗೆ ಇಲ್ಲಿನ ರೈತರಿಗಿದೆ. ಆದ್ದರಿಂದ ಹೊಲ ಇರುವ ಎಲ್ಲ ರೈತರೂ ತಪ್ಪದೆ ಈ ಚರಗವನ್ನು ಆಚರಿಸುತ್ತಾರೆ. ಅದಕ್ಕಾಗಿ ದೂರದೂರಿನ ತಮ್ಮ ಸ್ನೇಹಿತರನ್ನು, ಬಂಧು-ಬಾಂಧವರನ್ನು ಕರೆಯಿಸಿಕೊಳ್ಳುವ ಪದ್ಧತಿ ಈ ಭಾಗದಲ್ಲಿ ಇನ್ನೂ ಚಾಲ್ತಿಯಲ್ಲಿದೆ.
ಚರಗಕ್ಕೆ ಹೊರಡುವುದು ಮಧ್ಯಾಹ್ನದ ಸಮಯದಲ್ಲಾದರೂ ರೈತರ ಸಡಗರ ಬೆಳಗ್ಗಿನಿಂದಲೇ ಪ್ರಾರಂಭವಾಗಿರುತ್ತದೆ. ತಮ್ಮ ಚಕ್ಕಡಿಗಳಿದ್ದರೆ ಚಕ್ಕಡಿಗಳನ್ನು ತೊಳೆದು, ಎತ್ತುಗಳ ಮೈ ತೊಳೆದು, ಸಾಧ್ಯವಾದರೆ ಕೊಲ್ಹಾರಿ ಕಟ್ಟಿ ಹೊಲಕ್ಕೆ ಹರಡಲು ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ರೈತರ ಮನೆಗಳಲ್ಲಿ ಎತ್ತು-ಚಕ್ಕಡಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಆ ಜಾಗೆಯಲ್ಲಿ ಟ್ರಾಕ್ಟರ್, ಟಂಟA, ಕಾರು, ಬೈಕು ಮುಂತಾದ ವಾಹನಗಳು ಆಕ್ರಮಿಸಿಕೊಂಡಿವೆ. ತಮ್ಮದು ಯಾವುದೇ ವಾಹನವಿದ್ದರೂ ಅದನ್ನು ತೊಳೆದು ಸ್ವಚ್ಛಗೊಳಿಸಿ ಹೊಲಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ.
ರೈತ ಮಹಿಳೆಯರ ಸಂಭ್ರಮ ಇನ್ನೊಂದು ತೆರನಾಗಿರುತ್ತದೆ. ವಿವಿಧ ಬಗೆಯ ಖಾದ್ಯಗಳನ್ನು ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಮವಾಸ್ಯೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಅನ್ನ, ಸಾರು, ಪಲ್ಯೆ, ಕೋಸಂಬರಿ, ಕಾಳು ಇತ್ಯಾದಿ ಪದಾರ್ಥಗಳನ್ನು ಮಾಡಿ ಚರಗ ಚೆಲ್ಲಲು ಸಿದ್ಧರಾಗುತ್ತಾರೆ.