ಗದಗ:- ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಹೇಳಿದರು.
ಈ ಕುರಿತು ಗದಗನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ಸುಳಿವು ಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಆದರೆ ಇದು ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು. ಆದರೆ ಸಧ್ಯಕ್ಕೆ ಸ್ವಲ್ಪ ಮಟ್ಟಿನ ಸಂಪುಟ ವಿಸ್ತರಣೆ ಆಗಬಹುದು. ಆದರೂ ಅಂತಿಮವಾಗಿ ಸಿಎಂ ಹಾಗೂ ಹೈಕಮಾಂಡ್ ಸಂದರ್ಭ, ಸಕಾಲ ನೋಡಿ ನಿರ್ಣಯ ಮಾಡ್ತಾರೆ ಎಂದರು.
ಇನ್ನೂ 21 ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂದು ಗಾಂಧಿ ಪುತ್ಥಳಿ ಅನಾವರಣ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದಿಂದ ಬಹುದೊಡ್ಡ ಸಮಾವೇಶ ಮಾಡುತ್ತಿದ್ದೇವೆ. ಹೀಗಾಗಿ 21 ರವರೆಗೆ ಯಾವುದೇ ಸಚಿವ ಸಂಪುಟ ವಿಸ್ತರಣೆ ಆಗೋದಿಲ್ಲ. ಇದರ ಬಗ್ಗೆ 21ರ ನಂತರ ಮಾತನಾಡುತ್ತೇನೆ ಎಂದರು.
ಸಂಪುಟದಿಂದ ಹಿರಿಯ ನಾಯಕರಿಗೆ ಕೋಕ್!?
ಸಂಪುಟದಿಂದ ಹಿರಿಯ ನಾಯಕರಿಗೆ ಕೋಕ್ ನೀಡೋ ವಿಚಾರ ನನಗೆ ಗೊತ್ತಿಲ್ಲ. ಇದರ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಇನ್ನೂ ಇದೇ ವೇಳೆ ಜನವರಿ 8 ರಂದು ಗೃಹ ಸಚಿವ ಜಿ. ಪರಮೇಶ್ವರ್ ನಿವಾಸದಲ್ಲಿ ನಡೆಯಬೇಕಿದ್ದ ಡಿನ್ನರ್ ಮೀಟಿಂಗ್ DCM ಡಿಕೆಶಿ ಪ್ರಭಾವದಿಂದ ಕ್ಯಾನ್ಸಲ್ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಡಿನ್ನರ್ ಪಾರ್ಟಿ ಮೀಟಿಂಗ್ ಕ್ಯಾನ್ಸಲ್ ಮಾಡಿದ್ದು ನಾನಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಇನ್ ಬಿಟ್ವಿನ್ ಲೈನ್ ಓದೋದು ಸೂಕ್ತವಾದುದಲ್ಲ. ನಮ್ಮ ಪಕ್ಷದಲ್ಲಿ ಕನ್ಪ್ಯೂಸನ್ ಮಾಡೋದಕ್ಕೆ ಅನಾವಶ್ಯಕ ಷಡ್ಯಂತ್ರ ನಡೆದಿದೆ. ಡಿನ್ನರ್ ಮೀಟಿಂಗ್ ನಡೆದರೂ ಏನೂ ಸಮಸ್ಯೆ ಇಲ್ಲ, ಡಿನ್ನರ್ ಮೀಟಿಂಗ್ ಮಾಡದಿದ್ದರೂ ಏನೂ ಸಮಸ್ಯೆ ಆಗೋದಿಲ್ಲ. ಸಧ್ಯಕ್ಕೆ ಸಿದ್ಧರಾಮಯ್ಯ ಸರಕಾರ ಸುಭದ್ರವಾಗಿದೆ ಎಂದರು.
ಯಾರೇ ಶರಣಾಗತಿ ಮಾಡಿಕೊಂಡರು ಸಿಎಂಗೆ ಕ್ರೆಡಿಟ್:
ನಕ್ಸಲರ ಶರಣಾಗತಿಯಲ್ಲಿ ಸಿಎಂ ಕ್ರೆಡಿಟ್ ವಿಚಾರವಾಗಿ ಮಾತನಾಡಿ, ಯಾರೇ ಶರಣಾಗತಿ ಮಾಡಿಕೊಂಡರು ಸಿಎಂಗೆ ಕ್ರೆಡಿಟ್ ಹೋಗುತ್ತೆ. ಇದೊಂದು ಸಾಮಾಜಿಕ ಬದಲಾವಣೆಗೆ ನಕ್ಸಲರ ಮನಪರಿವರ್ತನೆಗೆ ಅಭಿನಂದನೆ ತಿಳಿಸಬೇಕು. ಸಿದ್ಧರಾಮಯ್ಯನವರ ನಾಯಕತ್ವ ಇದೆ ಅಂತ ಶರಣಾಗತಿಯಾಗಿದ್ದೇವೆ ಅಂತ ನಕ್ಸಲರು ತಿಳಿಸಿದ್ದಾರೆ. ಹೀಗಾಗಿ ಸಿದ್ಧರಾಮಯ್ಯನವರನ್ನ ಅಭಿನಂದನೆ ಮಾಡೋ ಬದಲು ಕೀಳು ರಾಜಕಾರಣ ಮಾಡ್ತಿರೋದು ಸರಿಯಲ್ಲ. ನಕ್ಸಲರ ಆಯುಧಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ ಅಂತ ಜನಸಾಮಾನ್ಯರು ಸಹ ಮಾತನಾಡಿಕೊಳ್ತಿದ್ದಾರೆ. ಹಾಗಿದ್ರೆ ನಕ್ಸಲರ ಆಯುಧಗಳನ್ನ ಹುಡುಕಿದವರು ಯಾರು ಅಂತ ಪ್ರಶ್ನಿಸುವ ಮೂಲಕ ಸಚಿವ HK ಪಾಟೀಲ್ ಇದೇ ವೇಳೆ ಹಾಸ್ಯಚಟಾಕಿ ಬೀಸಿದರು.