ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ತುಂಗಭದ್ರ ನೀರು ಪೂರೈಕೆಯಾಗುತ್ತಿದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂಬ ಆರೋಪಗಳು ಹೆಚ್ಚುತ್ತಿವೆ.
ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ನಿವಾಸಿಗಳು ಶನಿವಾರ ಸಾರ್ವಜನಿಕ ನಲ್ಲಿಗಳ ಬಳಿ ನೀರಿಗಾಗಿ ಗಂಟೆಗಟ್ಟಲೆ ಕಾಯ್ದು ನಿಂತ ದೃಶ್ಯ ಕಂಡು ಬಂದಿತು. ಕಳೆದ 20ರಿಂದ 30 ದಿನಗಳಿಂದ ಈ ಭಾಗಕ್ಕೆ ತುಂಗಭದ್ರ ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ನಲ್ಲಿಗಳಲ್ಲೂ ಸಮರ್ಪಕ ನೀರು ಬಾರದ ಹಿನ್ನೆಲೆಯಲ್ಲಿ ಜನರು ಪುರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ಭಾಗದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಗೆ ತರುವಲ್ಲಿ ಶ್ರಮಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಅವರ ನಿವಾಸವಿದ್ದು, “ನೀರು ತಂದ ಭಗೀರಥನ ಓಣಿಯಲ್ಲೇ ಈಗ ನೀರಿನ ಬರ ಎದುರಾಗಿದೆ” ಎಂದು ನಿವಾಸಿಗಳು ವ್ಯಂಗ್ಯವಾಡುತ್ತಿದ್ದಾರೆ.
ನೀರಿನ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ. ಪಟ್ಟಣದ ಬಹುತೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದರು.
ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಕಚೇರಿ ಎದುರು ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಮಾ ಮುತಗೊಂಡ, ಮುರಗಯ್ಯ ಅಕಳಂಡಸ್ವಾಮಿಮಠ, ಶಿವಯೋಗಿ ಗಡ್ಡದೇವರಮಠ, ಜ್ಯೋತಿ ಕೂಸನೂರುಮಠ, ಶೈಲಾ ಗಡ್ಡದೇವರಮಠ, ಮಲ್ಲಯ್ಯ ಗಡ್ಡದೇವರಮಠ, ಬಸನಗೌಡ ಮನ್ನಂಗಿ, ಕೊಟ್ರೆಶ್ ಕೆಸರಳ್ಳಿಮಠ, ಮಂಜುಳಾ ಕೂಸನೂರುಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ತುಂಗಭದ್ರ ನೀರು ಬರುತ್ತಿದೆ ಎನ್ನುವ ಮಾತು ಮಾತ್ರ ಇದೆ; ಆದರೆ ಕಳೆದ 30 ದಿನಗಳಿಂದ ನಮ್ಮ ಮನೆಗಳಿಗೆ ಒಂದು ಹನಿ ನೀರೂ ಬಂದಿಲ್ಲ”ಸ್ಥಳೀಯ ನಿವಾಸಿಗಳು



