ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಧರ್ಮವು ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ತತ್ವಗಳ ಮೇಲೆ ನಿಂತಿರುವ ಸ್ವತಂತ್ರ ಧರ್ಮವಾಗಿದ್ದು, ಹಿಂದೂ ಸಮಾವೇಶಗಳ ಹೆಸರಿನಲ್ಲಿ ಅದನ್ನು ಒಡೆಯುವ ಹಾಗೂ ಬಸವ ತತ್ವವನ್ನು ಮಸುಕುಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ “ಸಮಾನತೆಗಾಗಿ ನಾವು” ಸಂಘಟನೆ ಆಶ್ರಯದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ನಡೆದ ವಚನ ಅರಿವಿನ ಮಹಾಯಾನ, ಬಸವಾದಿ ಶಿವಶರಣರ ವಚನಗಳ ಸಾಮೂಹಿಕ ಪಠಣ ಮತ್ತು ಸಂವಿಧಾನದ ಪೂರ್ವಪೀಠಿಕೆಯ ಸಮಾನತೆಯ ಉದ್ಘೋಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದ ವೈಶಿಷ್ಟ್ಯತೆ ಮತ್ತು ಬಸವ ತತ್ವಗಳ ಬಗ್ಗೆ ಪ್ರಖರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
“ಜನಿವಾರವನ್ನು ಕಿತ್ತೊಗೆದು ಸಮಾನತೆ ತಂದ ಬಸವಣ್ಣನಿಗೆ ಮತ್ತೆ ಜನಿವಾರ ತೊಡಿಸುವ ಪ್ರಯತ್ನ ನಡೆಯುತ್ತಿದೆ. ‘ದೇಹವೇ ದೇವಾಲಯ’ ಎಂದ ಬಸವ ತತ್ವಕ್ಕೆ ವಿರುದ್ಧವಾಗಿ ಊರಿಗೊಂದು, ಓಣಿಗೊಂದು ದೇವಾಲಯ ನಿರ್ಮಿಸಿ ಮಹಿಳೆಯರನ್ನು ದೇವದಾಸಿಯರನ್ನಾಗಿ ಮಾಡಿದ ವ್ಯವಸ್ಥೆಯನ್ನು ಬಸವ ತತ್ವದ ಜೊತೆ ಬೆರೆಸುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ,” ಎಂದು ಆರೋಪಿಸಿದರು.
ಜಗತ್ತಿಗೆ ಮೊದಲು ಬೆಳಕಿನ ದಾರಿ ತೋರಿದವರು ಬುದ್ಧ. ನಂತರ ಬಸವಣ್ಣ ಸಮಾನತೆಯ ಲಿಂಗಾಯತ ಧರ್ಮವನ್ನು ಕೊಟ್ಟರು. ಸ್ವಾತಂತ್ರ್ಯಾನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧ ಮತ್ತು ಬಸವಣ್ಣನ ಆಶಯಗಳಿಗೆ ಸಂವಿಧಾನದ ಮೂಲಕ ಕಾನೂನಾತ್ಮಕ ಚೌಕಟ್ಟು ರೂಪಿಸಿ, “ಎಲ್ಲರೂ ಸಮಾನರು” ಎಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
“ಸಂವಿಧಾನದ ದೃಷ್ಟಿಯಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಿಲ್ಲ. ಸಮಾನತೆಯನ್ನು ವಿರೋಧಿಸುವವರು ರಾಷ್ಟ್ರದ್ರೋಹಿಗಳೇ” ಎಂದು
ಬಸವರಾಜ ಸೂಳಿಭಾವಿ ಅಸಮಾಧಾನ ವ್ಯಕ್ತಪಡಿಸಿದರು.
ವಚನ ಸಾಹಿತ್ಯವು ಜಾತಿ ಭೇದಗಳನ್ನು ಕಿತ್ತೊಗೆದು ಮನುಷ್ಯ ಪ್ರೀತಿಯ ಸಂದೇಶ ಸಾರಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮಾನತೆಯ ಪರಂಪರೆಯ ಅರಿವು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಶಿವಾನಂದ ತಮ್ಮಣ್ಣವರ, ಎಂ.ಎಸ್. ಹಡಪದ, ಗೌರಕ್ಕ ಬಡಿಗಣ್ಣವರ, ಎಚ್.ಎಸ್. ಹರ್ಲಾಪುರ, ರವೀಂದ್ರ ಹೊನವಾಡ, ಮುತ್ತು ಬಿಳೆಯಲಿ, ಎಸ್.ಎನ್. ಬಳ್ಳಾರಿ, ರಾಮಚಂದ್ರ ಹಂಸನೂರ, ಶರೀಫ್ ಬಿಳೆಯಲಿ, ಪರಶು ಕಾಳೆ, ಮಲ್ಲಿಕಾರ್ಜುನ ಖಂಡಮ್ಮನವರ, ಎ.ಯಿ. ನವಲಗುಂದ, ಎ.ಕೆ. ಮುಲ್ಲಾನವರ, ಪಾಲಾಕ್ಷಿ ಗಡದಿನ್ನಿ ಹಾಗೂ ಮುತ್ತು ಹಾಳಕೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಸವಾದಿ ಶಿವಶರಣರ ವಚನಗಳ ಸಾಮೂಹಿಕ ಪಠಣ ನಡೆಯಿತು. ಶರೀಫ್ ಬಿಳಿಯಲಿ ಹಾಗೂ ಸಂಗಡಿಗರು ವಚನಗೀತೆಗಳನ್ನು ಹಾಡಿ ಗಮನ ಸೆಳೆದರು. ಸಾರ್ವಜನಿಕರಿಗೆ ಸಾವಿರಾರು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು.
“ಹಿಂದೂ ಧರ್ಮಕ್ಕೆ ಯಾವುದೇ ಸ್ಪಷ್ಟ ಆಧಾರ ಇಲ್ಲ. ಧರ್ಮಗ್ರಂಥ ಇಲ್ಲ, ಸಂಸ್ಥಾಪಕರು ಇಲ್ಲ. ಆದರೆ ಲಿಂಗಾಯತ ಧರ್ಮಕ್ಕೆ ಬಸವಣ್ಣ, ಶಿವಶರಣರು ಮತ್ತು ವಚನಗಳೇ ಆಧಾರ. ಇದು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸಮಾನತೆಯ ಧರ್ಮ”ಬಸವರಾಜ ಸೂಳಿಭಾವಿ, ಸಾಹಿತಿ



