ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೇಲ್ವರ್ಗದ ಐದಾರು ಸಮುದಾಯಗಳಿಗೆ ನಿಗಮ ಹಾಗೂ ಅನುದಾನ ಮಂಜೂರ ಮಾಡುವುದರ ಮೂಲಕ ಅತೀ ಹಿಂದುಳಿದ ಹಾಗೂ ಸಣ್ಣ ಸಮುದಾಯಕ್ಕೆ ಪ್ರಾಮುಖ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷ ಡಾ.ಅಬ್ದುಲ್ರಝಾಕ್ ನದಾಫ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ 102 ಸಮುದಾಯಗಳು ಹಾಗೂ ಪ್ರವರ್ಗ-1ರಲ್ಲಿ 95 ಸಮುದಾಯಗಳು ಸರಕಾರದ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಅದರಲ್ಲಿ ಪಿಂಜಾರ್ ನದಾಫ ಮನ್ಸೂರಿ ದುದೇಕುಲ ಸಮುದಾಯವು ಒಂದಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ಸಮಾಜಕ್ಕೆ ನಿಗಮದ ಜೊತೆಗೆ ಅನುದಾನ ನೀಡಿದೆ ಎಂದರು.
ಮತ ಬ್ಯಾಂಕ್ಗೊಸ್ಕರ ದೊಡ್ಡ ಸಮುದಾಯಕ್ಕೊಂದು ನಿಗಮ ಸ್ಥಾಪಿಸಿದರೆ, ಬಡ ಸಮುದಾಯಗಳು ಬಡವರಾಗಿ ಉಳಿಯುತ್ತವೆ. ಈಗಾಗಲೇ ಅನೇಕ ಸಣ್ಣ ಜನಾಂಗದವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು, ಬಜೆಟ್ನಲ್ಲಿ ಅಂತಹ ಜನಾಂಗಗಳಿಗೆ ಅಪಮಾನ ಮಾಡಿದಂತಾಗಿದೆ. ಪಿಂಜಾರ ನದಾಫ ಮನ್ಸೂರಿ ದುದೇಕುಲ ಸಮುದಾಯಗಳು ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಹೀಗಾಗಿ ಮಾ.31ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಪಿಂಜಾರ್ ಅಭಿವೃದ್ದಿ ನಿಗಮ ಸ್ಥಾಪಿಸುವ ಮೂಲಕ ಮುಸ್ಲಿಂರ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಬ್ದುಲ್ರಝಾಕ್ ನದಾಫ ಒತ್ತಾಯಿಸಿದರು.