ಬೆಂಗಳೂರು:-ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ.
ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆದೇಶ ಕಾಯ್ದಿರಿಸಿತು. ಇದೇ ವೇಳೆ ಯಡಿಯೂರಪ್ಪ ಖುದ್ದು ಹಾಜರಿಗೆ ನೀಡಿದ್ದ ವಿನಾಯಿತಿಯನ್ನು ವಿಸ್ತರಿಸಿದೆ.
ಪ್ರಾಸಿಕ್ಯೂಷನ್ ಪರ ಪ್ರೊ.ರವಿವರ್ಮಕುಮಾರ್ ವಾದಮಂಡನೆ ಮಾಡಿದ್ದು, ಬಿ.ಎಸ್.ಯಡಿಯೂರಪ್ಪ ಮನೆಯ ಎಂಟ್ರಿ ರಿಜಿಸ್ಟರ್ ತಿರುಚಲಾಗಿದೆ ಎಂದು ಹೇಳಿದ್ದಾರೆ. ಫಿರ್ಯಾದಿ, ಬಾಲಕಿ, ಶಿವಾನಂದ ತಗಡೂರು ಬಂದ ಸಮಯ ಬದಲಿಸಲಾಗಿದೆ. ಆರೋಪಿಗಳು ಫಿರ್ಯಾದಿ ಫೇಸ್ ಬುಕ್ನಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಮನೆಗೆ ಕರೆತಂದು ವಿಡಿಯೋ ಡಿಲೀಟ್ ಮಾಡಿದ್ದಾರೆಂದು ವಾದಿಸಿದರು. ಮೊಬೈಲ್ ರೆಕಾರ್ಡಿಂಗ್ನಲ್ಲಿ ಯಡಿಯೂರಪ್ಪ ಧ್ವನಿಯಿದೆ ಎಂದ ಜಡ್ಜ್, ಆ ವಿಡಿಯೋ ರೆಕಾರ್ಡಿಂಗ್ನಲ್ಲಿರುವ ಹೇಳಿಕೆ ಡಿಸ್ಟರ್ಬಿಂಗ್ ಆಗಿವೆ. ಯಡಿಯೂರಪ್ಪ ಮನೆಗೆ ಫಿರ್ಯಾದಿ ಮಹಿಳೆ ಪದೇಪದೆ ಬಂದಿದ್ದಾರೆ. ಈ ಘಟನೆ ನಡೆದ ನಂತರ ಪದೇಪದೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಫಿರ್ಯಾದಿ ಈ ಹಿಂದೆ 56 ದೂರು ನೀಡಿರುವ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಬೇಕು. ಆರೋಪಪಟ್ಟಿಯಲ್ಲಿನ ಅಂಶಗಳೇ ಸಂಪೂರ್ಣ ಸತ್ಯವೆಂದು ಒಪ್ಪಬಾರದು ಎಂದು ಬಿ.ಎಸ್.ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಿಸಿದರು. ಆ ದಿನ ಏನೂ ನಡೆದಿಲ್ಲವೆಂದು ಅಲ್ಲಿದ್ದ ಶಿವಾನಂದ ತಗಡೂರು, ಆರಾಧ್ಯ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ಅದನ್ನು ತನಿಖೆಯ ಭಾಗವಾಗಿ ಪರಿಗಣಿಸಿಲ್ಲ. ಕೇವಲ ಸಂತ್ರಸ್ತೆ ಹೇಳಿಕೆಯಷ್ಟೇ ಅಲ್ಲ ಸಾಕ್ಷ್ಯಗಳೂ ಅಗತ್ಯವಿದೆ. ಎಲ್ಲ ಸಾಕ್ಷಿಗಳೂ ಈ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆಂದು ವಾದ ಮಂಡನೆ ಮಾಡಿದ್ದಾರೆ.
ಕೊನೆಯದಾಗಿ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ.