ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯ ಆಹಾರವಿಲ್ಲದೆ ಇದ್ದರೂ ನಡೆಯುತ್ತದೆ. ನೀರಿಲ್ಲದೆ ಇದ್ದರೂ ನಡೆಯುತ್ತದೆ. ಆದರೆ ಸಂಸ್ಕಾರವಿಲ್ಲದ ಮನುಷ್ಯನ ಬದುಕು ನಿರರ್ಥಕ ಮತ್ತು ವ್ಯರ್ಥ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಕಾಲೋನಿಯಲ್ಲಿ ನಡೆದ ಎರಡು ದಿನಗಳ ಸಂಚಾರಿ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು 2ನೇ ದಿನ ಸಂಸ್ಕಾರ ಮತ್ತು ಬದುಕು ಕುರಿತು ಆಶೀರ್ವಚನ ನೀಡಿದರು.
ಸಿದ್ಧಾಂತ ಶಿಖಾಮಣಿಯಲ್ಲಿ ಮನುಷ್ಯನ ಜೀವನದಲ್ಲಿ ಸಂಸ್ಕಾರ ಹೇಗೆ ಪಡೆಯಬೇಕು ಎಂಬುದರ ವಿವರಣೆಯಿದೆ. ಸಿದ್ಧಾಂತ ಶಿಖಾಮಣಿಯನ್ನು ಓದಿ ಅರ್ಥ ಮಾಡಿಕೊಂಡರೆ ಜೀವನದಲ್ಲಿ ಸಂಸ್ಕಾರವನ್ನು ಪಡೆದು ಸಾರ್ಥಕ ಬದುಕನ್ನು ಸಾಗಿಸಬಹುದು. ಜೀವನದಲ್ಲಿ ಎರಡು ಪ್ರಕಾರದ ಜ್ಞಾನಗಳಿವೆ. ಒಂದು ಲೌಕಿಕ ಜ್ಞಾನ, ಇನ್ನೊಂದು ಅಲೌಕಿಕ ಜ್ಞಾನ. ಲೌಕಿಕ ಜ್ಞಾನ ನಮಗೆ ನಿತ್ಯದ ಬದುಕನ್ನು ಸಾಗಿಸಲು ಸಹಾಯ ಮಾಡಿದರೆ, ಅಲೌಕಿಕ ಜ್ಞಾನ ನಮ್ಮ ಜೀವನದಲ್ಲಿ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ.
ನಾವು ಕೇವಲ ಲೌಕಿಕ ಜ್ಞಾನಕ್ಕಷ್ಟೇ ಮಹತ್ವ ನೀಡದೆ ಅಲೌಕಿಕ ಜ್ಞಾನಕ್ಕೂ ಮಹತ್ವ ನೀಡಿ, ದಿನದಲ್ಲಿ ಸ್ವಲ್ಪ ಸಮಯವಾದರೂ ಮನಸ್ಸನ್ನು ಆದ್ಯಾತ್ಮಿಕದೆಡೆಗೆ ತಿರುಗಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಉಡುಗೆ-ತೊಡುಗೆಗೆ ಬಹಳಷ್ಟು ಮಹತ್ವವಿದೆ. ಹಿಂದೂಗಳೆನಿಸಿಕೊಂಡವರು ನಮ್ಮ ಉಡುಗೆ ತೊಡುಗೆಯ ಕಡೆಗೆ ಗಮನ ನೀಡಬೇಕು. ಇದು ನಮ್ಮ ವ್ಯಕ್ತಿತ್ವವನ್ನು ಎತ್ತರಿಸಲೂ ಸಹ ಸಹಾಯ ಮಾಡುತ್ತದೆ ಎಂದರು.
ಶ್ರೀ ಅನ್ನಪೂರ್ಣೇಶ್ವರಿ ಅಕ್ಕನ ಬಳಗದವರು ಮತ್ತು ಗೀತಾ ಭೋಪಳಾಪೂರ ಪ್ರಾರ್ಥನೆ ನಡೆಸಿದರು. ಕಾರ್ಯಕ್ರಮದಲ್ಲಿ ಮುತ್ತಣ್ಣ ಪಲ್ಲೇದ, ಬಸವರಾಜ ಜಾಲೀಹಾಳ, ಎಂ.ಎ. ಹಿರೇವಡೆಯರ, ಡಾ. ಆರ್.ಕೆ. ಗಚ್ಚಿನಮಠ, ಎಸ್.ಕೆ. ಪಾಟೀಲ, ಅಂದಾನಯ್ಯ ಹಿರೇಮಠ, ಬಿ.ವಿ. ನೀರಲೋಟಿ, ಎಸ್.ವಿ. ಸಂಕನೂರ, ಟಿ.ಪಿ. ತಿಪ್ಪಶೆಟ್ಟಿ, ಡಾ. ಎಲ್.ಎಸ್. ಗೌರಿ, ಮಾಲಗೌಡರ, ಎಂ.ಸಿ. ಹಿರೇಮಠ, ಎನ್.ಎಚ್. ಮಾಸರೆಡ್ಡಿ, ಹುಣಸಿಮರದ, ವಿದ್ಯಾಸಾಗರ, ಬಿ.ಟಿ. ತಾಳಿ, ಸಂಗಯ್ಯ ಪ್ರಭುಸ್ವಾಮಿಮಠ, ರಾಜಣ್ಣ ಭೋಪಳಾಪೂರ, ವೀರೇಶ ಅಂಗಡಿ, ವಿ.ವಿ. ಅಣ್ಣಿಗೇರಿ ಮುಂತಾದವರಿದ್ದರು. ಅರುಣ ಕುಲಕರ್ಣಿ ಸ್ವಾಗತಿಸಿದರು.