ವಿಜಯಸಾಕ್ಷಿ ಸುದ್ದಿ, ಧಾರವಾಡ: ಸನ್ನದೇತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ, ನೀರು ಮಿಶ್ರಿತ ಮದ್ಯಸಾರ ಮಾರಾಟ, ಹೊರ ರಾಜ್ಯದ ಮದ್ಯ ಮಾರಾಟ, ಕಳ್ಳಭಟ್ಟಿ ಹಾಗೂ ನಕಲಿ ಮದ್ಯ ಮಾರಾಟ ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳ ಮಾರಾಟದಂತಹ ಪ್ರಕರಣಗಳಲ್ಲಿ ಭಾಗಿಯಾಗಿ ಅಬಕಾರಿ ಅಪರಾಧಗಳಲ್ಲಿ ತೊಡಗಿದ್ದ ಹಳೆಯ ಆರೋಪಿಗಳ ಚಲನ-ವಲನಗಳ ಮೇಲೆ ತೀವ್ರ ನಿಗಾ ವಹಿಸುವ ನಿಟ್ಟಿನಲ್ಲಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಇರುವ ಹಳೆಯ 150 ಆರೋಪಿಗಳ ಪರೇಡ್ನ್ನು ಬುಧವಾರ ಬೆಳಿಗ್ಗೆ ನವನಗರದ ಅಬಕಾರಿ ಉಪ ಆಯುಕ್ತರ ಕಚೇರಿ ಆವರಣದಲ್ಲಿ ನಡೆಸಿದರು.
ಸದರಿ ಆರೋಪಿಗಳು ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಕುರಿತು ಹಾಗೂ ಈ ಹಿಂದಿನ ಕೆಲಸವನ್ನು ತೊರೆದಿರುವ ಕುರಿತು ವಿಚಾರಣೆ ನಡೆಸಿ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟ ಮಾಡದಂತೆ ಅಬಕಾರಿ ಅಪರಾಧಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಯನ್ನು ನೀಡಿದರು.
ಹಳೆಯ ಆರೋಪಿಗಳ ಪರೇಡ್ ಕಾರ್ಯಕ್ರಮ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ರಮೇಶ ಕುಮಾರ ಹೆಚ್ ನೇತೃತ್ವದಲ್ಲಿ ನಡೆಸಲಾಯಿತು. ಪರೇಡನಲ್ಲಿ ಜಿಲ್ಲೆಯ ಉಪ ವಿಭಾಗಗಳ ಅಬಕಾರಿ ಉಪ ಅಧೀಕ್ಷಕರು ಹಾಗೂ ನಿರೀಕ್ಷಕರುಗಳು ಭಾಗವಹಿಸಿದ್ದರು.