ಬಿಜೆಪಿಯ ಮನೆ ಬಾಗಿಲು ಒಂದೇ ಇದೆ: ಸಂಸದ ಬಸವರಾಜ ಬೊಮ್ಮಾಯಿ 

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ ಎನ್ನುವದು ಶುದ್ಧ ಸುಳ್ಳು. ನಮ್ಮ ಬಿಜೆಪಿಯ ಮನೆ ಬಾಗಿಲು ಒಂದೇ ಇದೆ. ಈ ಬಗ್ಗೆ ಯಾರೂ ವಿಚಾರ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಲಕ್ಮೇಶ್ವರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪಟ್ಟಣದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿನ ಬಣ ರಾಜಕೀಯ ವಿಷಯದ ಕುರಿತು ಸ್ಪಷ್ಟನೆ ನೀಡಿದ ಅವರು, ಪಕ್ಷದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಇದು ಅಣ್ಣ-ತಮ್ಮರ ಜಗಳ. ಹಿರಿಯರು ಕೂತು ಬಗೆಹರಿಸುವ ವಿಶ್ವಾಸ ಇದೆ ಎಂದರು.

ರಾಜ್ಯ ಬಿಜೆಪಿ ಮೇಲೆ ಹೈಕಮಾಂಡ್ ನಿಯಂತ್ರಣ ಕಳೆದುಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್ ಅವರು ಏನು ಹೇಳುತ್ತಾರೋ ಅದೇ ಅಂತಿಮ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇದೆ. ಪಕ್ಷದ ರಾಜ್ಯಾಧ್ಯಕ್ಷರ ಚುನಾವಣೆ ಸುಗಮವಾಗಿ ನಡೆಯುತ್ತದೆ. ಚುನಾವಣೆ ಪ್ರಕ್ರೀಯೆ ಪೂರ್ವದಲ್ಲಿ ಎಲ್ಲವನ್ನೂ ಬಗೆಹರಿಸುವ ಪ್ರಯತ್ನಗಳು ಆಗುತ್ತಿವೆ. ಚುನಾವಣೆ ನಂತರ ಮತ್ತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಜನಾರ್ಧನ್ ರೆಡ್ಡಿ ಮತ್ತು ಶ್ರೀ ರಾಮುಲು ಅವರ ಪರಸ್ಪರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಸಂಸದ ಬಸವರಾಜ ಬೊಮ್ಮಾಯಿ, ಅವರಿಬ್ಬರೂ ಆತ್ಮೀಯ ಗೆಳೆಯರು, ಎಲ್ಲಿ ಆತ್ಮೀಯತೆ ಇರುತ್ತದೆಯೋ, ಅವರ ನಡುವೆ ಹೆಚ್ಚು-ಕಡಿಮೆ ಭಿನ್ನ-ಬೇಧಗಳು ಬರುವದು ಸಹಜ. ಕೊನೆಯಲ್ಲಿ ಅವರ ಕುಚಿಕು ಗೆಳೆತನ ಗಟ್ಟಿಯಾಗಿ ನಿಲ್ಲುತ್ತದೆ. ನಾನು ರಾಮುಲು ಅವರ ಬಳಿ ಮಾತನಾಡಿದ್ದೇನೆ. ಜನಾರ್ಧನ ರೆಡ್ಡಿ ಬಳಿ ಮಾತನಾಡುತ್ತೇನೆ. ಎಲ್ಲವೂ ಸರಿಯಾಗುತ್ತದೆ. ಇಬ್ಬರೂ ಒಂದಾಗಿ ಬರುವ ದಿನಗಳಲ್ಲಿ ಒಗ್ಗಟ್ಟಿನಿಂದ ಬಿಜೆಪಿ ಕಟ್ಟುವ ಕೆಲಸ ಮಾಡುತ್ತಾರೆ, ನೀವೇ ನೋಡುತ್ತೀರಿ ಎಂದು ನಗುತ್ತಾ ಉತ್ತರಿಸಿದರು.

ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಹೋಗುವ ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


Spread the love

LEAVE A REPLY

Please enter your comment!
Please enter your name here