ಬಳ್ಳಾರಿ: ಬಳ್ಳಾರಿಯ ಬಿಜೆಪಿ ನಾಯಕರಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಬಿರುಕು ತೀವ್ರಗೊಂಡಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದೆ. ಈ ವಿವಾದ ಬಿಜೆಪಿ ಹೈಕಮಾಂಡ್ ಗಮನ ಸೆಳೆದಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಇದರ ನಡುವೆ ಶ್ರೀರಾಮುಲು ಸಂಸ್ಕೃತಿ ಇರುವ ವ್ಯಕ್ತಿ, ವಾಲ್ಮೀಕಿ ಸಮಾಜವನ್ನು ತುಳಿಯುವ ಕೆಲಸ ರೆಡ್ಡಿ ಮಾಡ್ತಿದ್ದಾರೆ ಎಂದು ಶ್ರೀರಾಮುಲು ಬೆಂಬಲಿಗರಿಂದ ಸುದ್ದಿಗೋಷ್ಠಿ ನಡೆಸಿ ಜನಾರ್ದನ ರೆಡ್ಡಿ ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಬೆಂಬಲಿಗರು, ಶ್ರೀರಾಮುಲು ಓರ್ವ ಮಾಸ್ ಲೀಡರ್ ಇದ್ದು, ಇವರ ಬಗ್ಗೆ ಮಾತನಾಡುವವರು ಇನ್ಮುಂದೆ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಶ್ರೀರಾಮುಲು ಜೊತೆ ವಾಲ್ಮೀಕಿ ಸಮಾಜ ಇದೆ. ಅವರನ್ನು ಅವನು – ಇವನು ಅಂತಾ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಾರ್ದನ ರೆಡ್ಡಿ ಎನೋಬಲ್ ಫೈನಾನ್ಸ್ ದಿವಾಳಿಯಾಗಿದ್ದಾಗ ಮೊದಲಿಗೆ ಆಸರೆಯಾಗಿದ್ದೇ ಈ ಶ್ರೀರಾಮುಲು. ಆಗ ಕಾಂಗ್ರೆಸ್ ನಗರಸಭೆ ಸದಸ್ಯರಾಗಿದ್ದರು. ಶ್ರೀರಾಮುಲು ಅವರನ್ನು ಜನಾರ್ದನ ರೆಡ್ಡಿ ಬೆಳೆಸಿಲ್ಲ. ಸ್ವಂತ ಶಕ್ತಿಯಿಂದ ಶ್ರೀರಾಮುಲು ರಾಜ್ಯದಲ್ಲಿ ಬೆಳೆದಿದ್ದಾರೆ. ಇದು ವಾಲ್ಮೀಕಿ ಸಮಾಜದ ಒಗ್ಗಟ್ಟುನ್ನು ಒಡೆಯಲು ಪ್ರಯತ್ನ ಎಂದು ಅವರು ಆರೋಪ ಮಾಡಿದರು.
ಇತ್ತೀಚೆಗೆ ನಡೆದ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಜನಾರ್ದನ ರೆಡ್ಡಿ ಅವರು ಜವಾಬ್ದಾರಿ ತೆಗೆದುಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಗೆಲ್ಲಿಸಲಾಗಲಿಲ್ಲ. ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಅವರನ್ನು ಕೊಲೆಗಡುಕ ಅಂತಾ ಹೇಳಿದ್ದು, ಈ ಪ್ರಕರಣದಲ್ಲಿ ನೀವು ಭಾಗಿಯಾಗಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಜನಾರ್ದನ ರೆಡ್ಡಿ ಅವರೇ ನಿಮ್ಮ ಅಕ್ರಮ ಆಸ್ತಿ, ಬೇನಾಮಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾಗೇಂದ್ರ ಅವರನ್ನೂ ಕೂಡ ಜನಾರ್ದನ ರೆಡ್ಡಿ ಟಿಶು ಪೇಪರ್ ಅಂತಾ ಹೇಳಿದ್ದಾರೆ. ಶ್ರೀರಾಮುಲು ಅವರನ್ನು ಕೊಲೆಗಡುಕ ಎಂದಕ್ಕೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಎಸ್ಪಿಗೆ ದೂರು ಕೊಡುತ್ತೇವೆ ಎಂದು ಜನಾರ್ದನ ರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.