ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಠಯೋಗಿ ಶ್ರೀ ವೀರಪ್ಪಜ್ಜ ಕೋಡಿಕೊಪ್ಪದವರು. ನರೇಗಲ್ಲು ಮತ್ತು ಕೋಡಿಕೊಪ್ಪಗಳೆರಡೂ ವ್ಯವಹಾರಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡ ಸ್ಥಳಗಳು. ಇಂತಹ ಸ್ಥಳದಲ್ಲಿ ಪರಶಿವನ ಅವತಾರವಾದ ಶ್ರೀ ವೀರಪ್ಪಜ್ಜನವರು ಜನಿಸಿದರು. ಇಂತಹ ಮಹಾಮಹಿಮನ ಕ್ಷೇತ್ರದ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ನೀವೆಲ್ಲರೂ ಪುಣ್ಯವಂತರೆಂದು ಮುಂಡರಗಿಯ ನಾಡೋಜ ಜಗದ್ಗುರು ಶ್ರೀ ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಗುರುವಾರ ಸಂಜೆ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪುರಾಣ ಪ್ರವಚನದ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಎಂದಿಗೂ ಯಾವುದು ಹಳತು ಎನ್ನಿಸುವುದಿಲ್ಲವೋ ಅದು ಪುರಾಣ. ಜಗತ್ತಿನಲ್ಲಿ ಅದೆಷ್ಟೋ ಪುರಾಣಗಳಿವೆ. ಅವೆಲ್ಲದರಲ್ಲಿಯೂ ಶ್ರೀ ವೀರಪ್ಪಜ್ಜನವರ ಪುರಾಣವು ಬಹಳಷ್ಟು ವೈಶಿಷ್ಠ್ಯತೆಯಿಂದ ಕೂಡಿದೆ. ನಿತ್ಯವೂ ಅದನ್ನು ಕೇಳಿ ನೀವೆಲ್ಲ ಪುನೀತರಾಗಬೇಕು. ಜೀವನದಲ್ಲಿ ನೆಮ್ಮದಿಯಿಂದ ಬದುಕಲು ದೇವರಿದ್ದಾನೆ ಮತ್ತು ನಾವು ಖಂಡಿತ ಸಾಯುತ್ತೇವೆ ಎಂಬ ಎರಡು ವಿಷಯಗಳನ್ನು ನೆನಪಿನಲ್ಲಿಡಬೇಕು. ನಾವು ಬೇರೆಯವರಿಗೆ ಮಾಡಿದ ಉಪಕಾರವನ್ನು, ಬೇರೆಯವರಿಂದ ನಮಗಾದ ಅಪಕಾರವನ್ನು ಮರೆಯಬೇಕೆಂದು ಶ್ರೀಗಳು ತಿಳಿಸಿದರು.
ಉದ್ಭೋದಕ ನುಡಿಗಳನ್ನು ನುಡಿದ ಓಂಕಾರಗಿರಿ ಮಠದ ಶ್ರೀ ಫಕೀರೇಶ್ವರ ಪಟ್ಟಾಧ್ಯಕ್ಷರು ಆಶೀರ್ವಚನ ನೀಡಿ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇದನ್ನೇ ಶ್ರೀ ವೀರಪ್ಪಜ್ಜನವರು ತಮ್ಮ ವೇದ ವಾಕ್ಯದಲ್ಲಿ ತಿಳಿಸಿದ್ದಾರೆ. ಇದನ್ನು ಅರ್ಥಮಾಡಿಕೊಂಡವರು ಜೀವನದಲ್ಲಿ ಗೆದ್ದಂತೆ. ಶ್ರೀ ವೀರಪ್ಪಜ್ಜನವರು ತಮ್ಮನ್ನು ತಾವು ಸುಟ್ಟುಕೊಂಡು ಈ ಜಗತ್ತಿಗೆ ಬೆಳಕು ನೀಡಿದ ಮಹಾಮಹಿಮರು ಎಂದರು.
ರೋಣ ಬೂದೀಶ್ವರ ಮಠದ ಪ.ಪೂ. ಡಾ. ವಿಶ್ವನಾಥ ಮಹಾಸ್ವಾಮಿಗಳು ಪುರಾಣ ಪ್ರಾರಂಭಿಸಿದರು. ಚಿಕ್ಕಮನ್ನಾಪುರದ ಹನುಮಂತ ಮೇಟಿ ಸಂಗೀತ ಮತ್ತು ಬರದೂರಿನ ಶಾಂತಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಪುಣ್ಯಾರಾಧನೆ ಶತಮಾನೋತ್ಸವಕ್ಕೆ ದಾನ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಧುರೀಣ ರವಿ ದಂಡಿನ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯ ಮೇಲೆ ಕುಕನೂರಿನ ಗುದ್ನೆಪ್ಪ ಮಠದ ಸ್ವಾಮಿಗಳು, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಇದ್ದರು. ನಿವೃತ್ತ ಪ್ರಾಚಾರ್ಯ ಬಿ.ಆರ್. ಜಾಲೀಹಾಳ ಸ್ವಾಗತಿಸಿದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಕಪೋತಗಿರಿಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ವೀರಪ್ಪಜ್ಜನವರು ಹುಚ್ಚರಲ್ಲ. ಅವರನ್ನು ಹುಚ್ಚರೆಂದು ಕರೆಯುತ್ತಿರುವ ನಾವು ಹುಚ್ಚರು. ಸಂಸಾರದ ಹಿಂದೆ ಬಿದ್ದು ಆಧ್ಯಾತ್ಮವನ್ನೆ ಮರೆತು ಬಾಳುತ್ತಿರುವ ನಾವು ಮೂಢರು. ಪುರಾಣ ಶ್ರವಣದಿಂದ ಜ್ಞಾನ ಸಿಗುತ್ತದೆ. ಅದರಲ್ಲಿಯೂ ಶ್ರೀ ವೀರಪ್ಪಜ್ಜನವರ ಪುರಾಣ ಖಂಡಿತ ನಿಮ್ಮ ಬಾಳಿಗೆ ಬೆಳಕು ನೀಡುತ್ತದೆ. ನಿತ್ಯವೂ ಕೇಳಿ ಬಾಳಿಗೆ ಬೆಳಕು ತಂದುಕೊಳ್ಳಿ. ಶ್ರೀ ವೀರಪ್ಪಜ್ಜನವರಿಂದ ನರೇಗಲ್ಲ ಮತ್ತು ಕೋಡಿಕೊಪ್ಪಕ್ಕೆ ಈ ನಾಡಿನಲ್ಲಿ ದೊಡ್ಡ ಹೆಸರಿದೆ ಎಂದು ತಿಳಿಸಿದ ಶ್ರೀಗಳು, ವೀರಪ್ಪಜ್ಜನವರ ಜ್ಞಾನ ಪ್ರಸಾದ, ಅನ್ನ ಪ್ರಸಾದವನ್ನು ಸ್ವೀಕರಿಸಿ ನೀವೆಲ್ಲರೂ ಪುಣ್ಯವಂತರಾಗಿರಿ ಎಂದರು.