ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಹಬ್ಬ ಹಾಗೂ ಸರಸ್ವತೀ ಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಯೋಗೀಶ ಎ, ಶುದ್ಧಗಂಗಾ ಮೇಲ್ವಿಚಾರಕರಾದ ಧರ್ಮರಾಜ, ಸಿಇಓ ಪಿ.ಎಚ್. ಕಡಿವಾಲ, ರವಿ ಹೆಬ್ಬಳ್ಳಿ ಹಾಗೂ ಡಾ. ಗಂಗೂಬಾಯಿ ಪವಾರ ಸರಸ್ವತೀ ಮಾತೆಯ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲೆಯ ನಿರ್ದೇಶಕ ಯೋಗೀಶ ಎ ಮಾತನಾಡಿ, ವಿದ್ಯಾದಾನ ಸಮಿತಿಯು ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ತನ್ನದೇ ಆದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾನಾ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ವಿದ್ಯೆಯನ್ನು ಧಾರೆಯೆರೆದ ವಿದ್ಯಾ ಸಂಸ್ಥೆಯಾಗಿದೆ. ಇಂತಹ ಐತಿಹಾಸಿಕ ಪರಂಪರೆಯುಳ್ಳ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ನಾನು ಚಿರಋಣಿ ಎಂದರು.
ಮುಖ್ಯ ಅತಿಥಿಗಳಾದ ಗದಗ ಜಿಲ್ಲೆಯ ಶುದ್ಧಗಂಗಾ ಮೇಲ್ವಿಚಾರಕರದ ಧರ್ಮರಾಜ ಬಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಿದರು. ಹಾಗೆಯೇ ಪ್ರಸ್ತುತ ಈ ಶಿಕ್ಷಣ ಸಂಸ್ಥೆಯು ಬಡ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಬಡತನ, ಅನಕ್ಷರತೆ, ನಿರುದ್ಯೋಗ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ವಿ. ಹವಾಲ್ದಾರ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಶಾಲೆಯ ಸಿಇಓ ಪಿ.ಎಚ್. ಕಡಿವಾಲ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಡಾ. ಗಂಗೂಬಾಯಿ ಪವಾರ ಮತ್ತು ರವಿ ಹೆಬ್ಬಳ್ಳಿ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಕಾವೇರಿ ಲಮಾಣಿ ಯವರು ಅತಿಥಿಗಳನ್ನು ಪರಿಚಯಿಸಿದರು.
ಶಿಕ್ಷಕಿಯರಾದ ಜಯಶ್ರೀ ಪುರಮಶೆಟ್ಟಿ ಸ್ವಾಗತಿಸಿದರು, ಎಂ.ಎನ್. ಹುಬ್ಬಳ್ಳಿ ನಿರೂಪಿಸಿದರು, ಎಸ್.ಸಿ. ಪಾಟೀಲ ವಂದಿಸಿದರು. ಈ ಸಂದರ್ಭದಲ್ಲಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಎಂ.ಆರ್. ಡೊಳ್ಳಿನ, ನಿವೃತ್ತ ಮುಖ್ಯೋಪಾಧ್ಯಾಯರಾದ ಜಿ.ಡಿ. ಪಡೇಸುರ, ಎ.ಬಿ. ಬೂದಿಹಾಳ, ಬಿ.ಹೆಚ್. ಜಂತ್ಲಿ, ವಿದ್ಯಾರ್ಥಿ ಪ್ರತಿನಿಧಿ ಮೇಘನಾ ಪುರಮಶೆಟ್ಟಿ, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಶಾಲೆಗೆ ಹಲವಾರು ರೀತಿಯ ಸಹಾಯವಾಗಿದೆ. ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನದಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯಕವಾಗಿದೆ ಎಂದರು.