ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತದಲ್ಲಿ ಗೋವುಗಳನ್ನು ದೇವತೆಯೆಂದು ಪೂಜಿಸುತ್ತಾರೆ. ಆಕಳಿನ ಹೊಟ್ಟೆಯಲ್ಲಿ ಉತ್ಪಾದನೆಯಾಗುವ ಕ್ಷೀರವು ಅಮೃತಕ್ಕೆ ಸಮಾನವಾಗಿದೆ. ಅಬಾಲವೃದ್ಧರಾಗಿ ಎಲ್ಲರಿಗೂ ಇದು ಅತ್ಯಂತ ಪ್ರಿಯವಾಗಿದ್ದು, ಭಗವಂತನಿಗೂ ಸಹ ಆಕಳಿನ ಕ್ಷೀರ ಅತ್ಯಂತ ಪ್ರಿಯವಾಗಿದೆ ಎಂದು ದತ್ತ ದೇವಸ್ಥಾನದ ಅರ್ಚಕ ಶ್ರೀವಲ್ಲಭಶಾಸ್ತ್ರಿ ಸದರಜೋಷಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ 115ನೇ ಗುರುಪ್ರತಿಪದೆ ಉತ್ಸವದ ನಿಮಿತ್ತ ಶ್ರೀ ಗುರು ದತ್ತಾತ್ರೇಯನಿಗೆ ನಡೆದ ಕ್ಷೀರಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಶಿವನು ಅಭಿಷೇಕ ಪ್ರಿಯ. ಕ್ಷೀರಾಭಿಷೇಕದಿಂದ ಭಗವಂತ ಸಂಪ್ರೀತನಾಗುತ್ತಾನೆ. ಭಕ್ತರ ಇಷ್ಟಾರ್ಥಗಳನ್ನು ಈಡೇರುವಂತೆ ಹರಸುತ್ತಾನೆ. ಕ್ಷೀರವನ್ನು ದೇವರಿಗೆ ಅರ್ಪಿಸುವಾಗ ಮನಸ್ಸು ಮೂರ್ತಿಯನ್ನು ನೋಡುತ್ತ ಕೇಂದ್ರೀಕರಿಕೊಂಡು ಒಳ್ಳೆಯ ಯೋಚನೆಗಳಷ್ಟೇ ಮನ ತುಂಬಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಅರುಣ ಜಿ.ಕುಲಕರ್ಣಿ(ಕುರಗಡ್ಡಿ) ಅವರು ಸತತ 35 ವರ್ಷಗಳಿಂದ ಶ್ರೀ ದತ್ತಾತ್ರೇಯರಿಗೆ ಕ್ಷೀರಾಭಿಷೇಕ ಸೇವೆಯನ್ನು ಅರ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವೇ.ಮೂ. ವಿಶ್ವನಾಥಭಟ್ಟ ವೈದ್ಯ, ಡಾ. ಎನ್.ಎಲ್. ಗ್ರಾಮಪುರೋಹಿತ, ಅರುಣ ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಎ.ಜಿ. ಕುಲಕರ್ಣಿ, ಡಾ. ಕೃಷ್ಣಾ ಕಾಳೆ, ಅಜಿತ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ನಾಗರಾಜ ನಾಡಿಗೇರ, ವಿ.ಆರ್. ಗ್ರಾಮಪುರೋಹಿತ, ಸೋಮನಾಥ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ಕಿರಣ ಕಾಳೆ, ಮುಕುಂದ ಸೂರ್ಯಭಟ್ಟನವರ, ಸುಹಾಸ ಕುಲಕರ್ಣಿ, ರಾಮಕೃಷ್ಣ ಸದರಜೋಶಿ, ಸುಮಂತ ಗ್ರಾಮಪುರೋಹಿತ ಸೇರಿದಂತೆ ಇತರರಿದ್ದರು.