ಲಕ್ಮೇಶ್ವರ: ರಾಜ್ಯಾದ್ಯಂತ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಾಷ್ಟಾವಧಿ ಮುಷ್ಕರಕ್ಕೆ ಬೆಂಬಲಾರ್ಥವಾಗಿ ಲಕ್ಮೇಶ್ವರದ ತಹಸೀಲ್ದಾರ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ 4ನೇ ದಿನ ಮುಷ್ಕರಕ್ಕೆ ಗುರುವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಜಿ.ಡಿ ಹವಳದ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಿ.ಎಸ್.ಹರ್ಲಾಪೂರ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳು ಈ ಹಿಂದೆ ಕೈಗೊಂಡ ಮುಷ್ಕರದ ಯಾವುದೇ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸದ ಕಾರಣ ರಾಜ್ಯಾದ್ಯಂತ ಮತ್ತೆ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರಕ್ಕೆ ಇಳಿದಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸಗಳ ಮೇಲೆ ಸಮಸ್ಯೆ ಉಂಟಾಗುತ್ತದೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಬೇಕು. ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಟೇಬಲ್ ಕುರ್ಚಿ ಅಲ್ಮೆರಾ, ಮೊಬೈಲ್ ಸಿಯುಜಿ ಸಿಮ್ ಮತ್ತು ಡೇಟಾ, ಲ್ಯಾಪ್ ಟಾಪ್, ಪ್ರಿಂಟರ್ ಸ್ಕ್ಯಾನರ್, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಬಗ್ಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಹೋರಾಟಕ್ಕೆ ನೈತಿಕವಾಗಿ ಧೈರ್ಯ ತುಂಬುವ ನಿಟ್ಟಿನಲ್ಲಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ಹೇಳಿದರು.
ನಂತರ ವಿವಿಧ ಸಂಘಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸಲ್ಲಿಸಿದರು. ಈ ವೇಳೆ ಸಂಘ ಪ್ರಧಾನ ಕಾರ್ಯದರ್ಶಿ ಎಂ.ಎ.ನದಾಫ, ಮಂಜುನಾಥ ವಾರದ, ಹಾಗೂ ಪದಾಧಿಕಾರಿಗಳು ಎನ್ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಎಫ್.ಎಸ್.ತಳವಾರ, ಆರ್.ಡಿ.ಪಿ.ಆರ್ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ ಧರ್ಮರ, ವಿಕಲಚೇತನ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಕುಂಬಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ಚೌಹಾಣ ಎಂ.ಬಿ ಹೂಗಾರ, ಎ.ಎಂ ಅಕ್ಕಿ, ಶ್ರೀಕಾಂತ ಬಾಲೆಹೊಸೂರ, ಮಂಜುನಾಥ ಕೊಕ್ಕರಗುಂದಿ ಹಾಗೂ ಎಲ್ಲಾ ನಿರ್ದೇಶಕರು ಪದಾಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ನೌಕರ ಬಾಂಧವರು ಹಾಜರಿದ್ದು ಸಂಪೂರ್ಣ ಬೆಂಬಲ ಸೂಚಿಸಿದರು.
ಮುಷ್ಕರ ನಿರತ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲೂಕ ಅಧ್ಯಕ್ಷ ಡಿ.ಎಸ್ ಕುಲಕರ್ಣಿ, ಉಪಾಧ್ಯಕ್ಷ ಎಚ್.ಕೃಷ್ಣಮೂರ್ತಿ, ಬಿ.ವೈ ಮಲ್ಲಿಗವಾಡ, ಎನ್.ಬಿ ಕನೋಜ, ಸುಬೇದಖಾನ ಪಠಾಣ, ಡಿ.ಎಲ್ ವಿಭೂತಿ, ಆರ್.ಎನ್ ನೆಗಳೂರ, ಪಾತಿಮಾ ಪತ್ತೆಖಾನ, ಸೌಮ್ಯ ಕೆ, ಕೆ.ಎನ್ ಪಾಟೀಲ ಮುಂತಾದವರಿದ್ದರು.
ಲಕ್ಮೇಶ್ವರದ ತಹಸೀಲ್ದಾರ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ 4 ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ವಿವಿಧ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.