ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿದ್ಯಾರ್ಥಿಗಳು ಭಯಭೀತರಾಗದೇ ಆತ್ಮಸ್ಥೈರ್ಯದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಿ ಬರೆದು ಯಶಸ್ವಿಯಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಹೇಳಿದರು.

Advertisement

ಅವರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ವಡವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಯೋಗದಲ್ಲಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಪ್ರತಿಭಾವಂತ ವಿದ್ಯಾರ್ಥಿಗಳ 3 ದಿನಗಳ `ಯಶೋಸಾಧನ ಶಿಬಿರ’ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪರೀಕ್ಷೆಗಳು ಮುಂದಿನ ಹಂತದ ಶಿಕ್ಷಣಕ್ಕೆ ದಿಕ್ಸೂಚಿಯಾಗಿದೆ. ಪರೀಕ್ಷೆಯ ಕಾಲ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಅತ್ಯಮೂಲ್ಯವಾದ ಸಮಯ ವ್ಯರ್ಥಮಾಡದೇ ಶಿಕ್ಷಕರ ಮಾರ್ಗದರ್ಶನದಲ್ಲಿ ಓದಬೇಕು. ಉತ್ತಮ ಫಲಿತಾಂಶದ ಗುರಿಯೊಂದಿಗೆ ಪರೀಕ್ಷೆಯನ್ನು ಅತ್ಯಂತ ನಿಷ್ಠೆಯಿಂದ ಎದುರಿಸಬೇಕು ಎಂದರು.

ಲಕ್ಮೇಶ್ವರದ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗರಾಜ ಗಡಾದ ಮಾತನಾಡಿ, ಸಾಧನೆ ಎನ್ನುವುದು ಎಂದಿಗೂ ಸಾಧಕನ ಸ್ವತ್ತು. ನಿಮ್ಮ ಆರ್ಥಿಕ ಹಿನ್ನೆಲೆ ಏನೇ ಇದ್ದರೂ, ಅದೆಷ್ಟೇ ಕಡು ಬಡವರಿದ್ದರೂ ನಿಮ್ಮ ಪ್ರತಿಭೆ-ಪರಿಶ್ರಮದಿಂದ ಸಮಾಜ ತಿರುಗಿ ನೋಡುವ ಸಾಧನೆಯನ್ನು ಮಾಡಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎನ್.ಸಿ.ಕೆ ಪಾಟೀಲ, ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು. ಕಾರ್ಯಕ್ರಮದ ನೋಡಲ್ ಅಧಿಕಾರಿ, ಪ್ರೌಢ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ಅರಳಿಹಳ್ಳಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಎಚ್.ಎಂ. ಗುತ್ತಲ, ಸಂಗಮೇಶ ಅಂಗಡಿ, ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ ದೇಶಪಾಂಡೆ, ಎಂ.ಎಸ್. ಮಳಿಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಂಪನ್ಮೂಲ ಶಿಕ್ಷಕರಾದ ಎಸ್.ಪಿ. ಹಲಸೂರ, ವಿನಾಯಕ ಘೋರ್ಪಡೆ, ಫಕಿರೇಶ ಚಕಾರದ, ಮೇರಿ ಅಂಥೋನಿ, ಎ.ಎ. ನದಾಫ್, ನಾಗರಾಜ ಮಜ್ಜಿಗುಡ್ಡ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಕ್ಮೇಶ್ವರ ಭಾಗದ 40 ಪ್ರೌಢಶಾಲೆಗಳ 135 ವಿದ್ಯಾರ್ಥಿಗಳು ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಹಾಗೂ ವಡವಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ವಡವಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿ.ಆರ್.ಪಿಗಳಾದ ಸತೀಶ ಬೋಮಲೆ, ಉಮೇಶ ನೇಕಾರ, ಮಂಜುನಾಥ ಬಂಡಿವಾಡ ನಿರ್ವಹಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಸಿ.ಎನ್ ವಿದ್ಯಾಸಂಸ್ಥೆಯ ಲೋಹಿತ ನೆಲವಿಗಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಸಿಕ್ಕಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಆಸಕ್ತಿಯಿಂದ ಅಧ್ಯಯನ ಮಾಡಿ ಉನ್ನತ ಸಾಧನೆಗೆ ಸಜ್ಜಾಗಬೇಕು. ಅದಕ್ಕೆ ನಮ್ಮ ಸಂಸ್ಥೆ ನಿಮಗೆ ಸಹಕಾರಿಯಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here