ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ನಿಮ್ಮಲ್ಲಿ ಶಿಸ್ತು ಹಾಗೂ ಸಂಯಮವನ್ನು ಬೆಳೆಸಿಕೊಳ್ಳಬೇಕು. ಬರೀ ಹುಡುಗಾಟ ಜೀವನವಲ್ಲ. ಹುಡುಗಾಟವನ್ನೇ ಮಾಡುತ್ತ ನಡೆದರೆ ಮುಂದೆ ನಿಮ್ಮ ಜೀವನವೇ ಹುಡುಗಾಟವಾದೀತು. ಇದರಿಂದ ನಿಮ್ಮ ತಂದೆ-ತಾಯಿಗಳು ಪಶ್ಚಾತ್ತಾಪ ಅನುಭವಿಸುತ್ತಾರೆ. ನಿಮ್ಮ ಜೀವನ ಹಾಗಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ವಿದ್ಯಾರ್ಥಿಗಳಿಗೆ ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದ ಡಾ. ವೀರಪ್ಪ ಸಂಕನೂರ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಂತ ಮಹತ್ವದ್ದು. ಈಗ ನೀವು ಉತ್ತಮ ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ಪಾಸಾದರೆ ನಿಮ್ಮ ಜೀವನ ಸುಂದರವಾಗುತ್ತದೆ. ನಿಮಗೆ ಪ್ರೋತ್ಸಾಹ ನೀಡುವುದಕ್ಕೆಂದು ನಿಗದಿತ ಹಣವನ್ನು ಬ್ಯಾಂಕಿನಲ್ಲಿಟ್ಟು ಅದರ ಬಡ್ಡಿಯಲ್ಲಿ ಪ್ರತಿ ವರ್ಷ ಕಾಲೇಜಿಗೆ ಪ್ರಥಮ ಬರುವವರಿಗೆ 3000 ರೂ, ದ್ವಿತೀಯ 2000 ರೂ ಮತ್ತು ತೃತೀಯ 1000 ರೂಗಳ ಬಹುಮಾನ ನೀಡಲಾಗುವದೆಂದು ಸಂಕನೂರ ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಭಾಸ ಸಂಕನೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಆರ್. ಕರಮುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಎಸ್.ಎಸ್. ಹಿರೇಮಠ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಹೇಳಿದರು. ವಿದ್ಯಾರ್ಥಿನಿ ಕಾವೇರಿ ರಾಮಶೆಟ್ಟಿ ಅನಿಸಿಕೆಗಳನ್ನು ಹಂಚಿಕೊಂಡಳು.
ಗ್ರಾ.ಪಂ ಮಾಜಿ ಅಧ್ಯಕ್ಷ ಜಗದೀಶ ಕರಡಿ, ಶಶಿಧರ ಹೊಟ್ಟಿನ, ನಿವೃತ್ತ ಮುಖ್ಯ ಶಿಕ್ಷಕ ಎನ್.ವಿ. ಜೋಷಿ ವೇದಿಕೆಯ ಮೇಲಿದ್ದರು. ಉಪನ್ಯಾಸಕ ಬಿ.ಬಿ. ಇಟಗಿ ಸ್ವಾಗತಿಸಿದರು. ಎಚ್.ಎ. ಕರ್ನೂಲ ನಿರೂಪಿಸಿದರು.