ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಭೇಟಿ ನೀಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಜಗೇಶ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ಹಿಂದೆ ಕುಂಭಮೇಳ ನಡೆದಾಗ ನಾವು ಇರಲಿಲ್ಲಾ. ಮುಂದೆ ಬರುವಾಗಲು ನಾವಿರುವುದಿಲ್ಲಾ”. ಸಾಧ್ಯವಾದರೆ ಹೋಗಿ ಬನ್ನಿ ಎಂದು ಹೇಳಿದ್ದಾರೆ.
“ಈ ಮಹಾ ಕುಂಭಮೇಳ ಕಳೆದ ಬಾರಿ ನಡೆದದ್ದು 1880ರಲ್ಲಿ. ನನ್ನ ತಾತನ ಜನನ ಆದದ್ದು 1896ರಲ್ಲಿ, ಅಂದರೆ ನಮ್ಮ ತಾತ ಹುಟ್ಟುವ 16 ವರ್ಷದ ಹಿಂದೆ ಕುಂಭಮೇಳೆ ನಡೆದಿತ್ತು. ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೇ ತಲೆಮಾರಿಗೆ ಬಂದಿದೆ. ಮುಂದಿನ ಬಾರಿ ಈ ಮಹಾಕುಂಭ ಬರೋದು 2174ನೇ ಇಸವಿಯಲ್ಲಿ! ಅಂದರೆ ನಮ್ಮ ಮುಂದಿನ 5 ತಲೆಮಾರಿನ ಬದುಕು ಇಲ್ಲವಾಗಿರುತ್ತದೆ” ಎಂದು ಜಗ್ಗೇಶ್ ತಿಳಿಸಿದ್ದಾರೆ.
“ನಾನು ನನ್ನದು, ನನ್ನ ಹಣ, ನನ್ನ ಮನೆ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಪರಿವಾರ ಎನ್ನುವವರ ಕಥೆ ಏನಾಗಿರುತ್ತದೆಯೋ? ದೇವರೆ ಬಲ್ಲ. ಕಡೆಯ ಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಹಟ್ಟ ಸೇರುತ್ತೆ ಇಲ್ಲ ಕಸದ ಜೊತೆ ಲೀನ! ಹಿಂದೆ ಬಂದಾಗ ನಾವು ಇರಲಿಲ್ಲಾ. ಮುಂದೆ ಬರುವಾಗಲು ನಾವಿರುವುದಿಲ್ಲಾ. ಈ ಸತ್ಯ ಅರಿವಾದರೆ ಮನುಷ್ಯ ಮನುಷ್ಯನಾಗಿಯೇ ಉಳಿದು ಹೋಗುವ. ಇಂಥ ಹಿಂದೂ ಜನಸಾಗರವನ್ನ ನನ್ನ ಬದುಕಲ್ಲಿ ಕಂಡದ್ದು ಇದೇ ಮೊದಲು.. ಮೂಕವಿಸ್ಮಿತನಾದೆ” ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
“ನಾವು ದುಡಿದದ್ದು ಮುಂದಿನವರು ಉಳಿಸಿಕೊಂಡಿದ್ದರೆ, ಅಲ್ಪ ಸ್ವಲ್ಪ ಹರಟೆಯಲ್ಲಿ ನಮ್ಮ ಹೆಸರು ಬಂದುಹೋಗಬಹುದು. ಆದರೆ, ಯಾರು ಹೋದರೂ ಒಬ್ಬರು ನೆನಪಲ್ಲಿ ಉಳಿದೇ ಇರುತ್ತಾರೆ, ಅವರೇ ಶಾರದಾಸುತರು! ಅಂದರೆ ಗಾಯಕರು, ನಟರು, ನಟಿಯರು, ಸಂಗೀತ ವಿದ್ವಾಂಸರು ಹಾಗೂ ಲೇಖಕರು. ಅಲ್ಲಿಗೆ ಯಾವ ಪುರುಷಾರ್ಥಕ್ಕೆ ಮನುಷ್ಯರು ನಾವು ನಾವೇ, ನಮ್ಮದೇ, ನಂದೇ, ನಾನಿಲ್ಲದೇ ಎಂಬ ಅಜ್ಞಾನ ಬೇರೂರಿದೆ ಒಳಗೆ” ಎಂದಿದ್ದಾರೆ ಜಗ್ಗೇಶ್ .
“ಮಹಾಕುಂಭಕ್ಕೆ ಆಧ್ಯಾತ್ಮಿಕ ಸಾಧನೆಗೆ ಹೋದವರಿಗೆ, ನಾನು ಮೇಲೆ ಹೇಳಿದ ಎಲ್ಲಾ ಮಾತುಗಳು. ಮಾನಸದಲ್ಲಿ ಮಜ್ಜನವಾಗಿ, ದೇಹವೆಲ್ಲಾ ಮುಂದೆ ಮಣ್ಣು ಎಂಬ ಅರಿವು ಮನದ ಆಳಕ್ಕೆ ಹೋಗಿ, ಮನನವಾಗಿ, ಮೌನವಾಗಿ, ಅಹಂಕಾರ ಅಡಗಿ ಮನಸ್ಸು ಶಾಂತವಾಗುತ್ತದೆ. ನಾನು ಹೋದೆ, ನೋಡಿದೆ, ಬಂದೆ ಎನ್ನುವವರಿಗೆ ಅವರ ಬದುಕಿನ ಮತ್ತೊಂದು ಪ್ರವಾಸ ಅನ್ನಿಸುತ್ತದೆ” ಎಂದು ಜಗ್ಗೇಶ್ ತಿಳಿಸಿದ್ದಾರೆ.
“ನಾನು ಭಾವುಕನಾದೆ, ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ, ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ. ನನಗನ್ನಿಸಿದ್ದು ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದು ನಡೆಯದು. ಇನ್ನು, ಸಮಯವಿದೆ, ಹೋಗುವವರು ಹೋಗಿಬನ್ನಿ. ಮತ್ತೆ ನೋಡಲಾಗದು ಈ ಮಹಾಕುಂಭ.. ಸರ್ವೇಜನಾಃ ಸುಖಿನೋಭವಂತು” ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.