ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಮೀಪದ ಗ್ರಾಮಗಳಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಕಾರ್ಖಾನೆಗಳಿಂದ ಮತ್ತು ಈಗ ಹೊಸದಾಗಿ ಆರಂಭವಾಗುತ್ತಿರುವ ಬಿಎಸ್ಪಿಎಲ್ ಕಾರ್ಖಾನೆಗಳಿಂದ ಇಲ್ಲಿ ಯಾವುದೇ ಉದ್ಯೋಗ ಸೃಷ್ಟಿ ಆಗುವದಿಲ್ಲ. ಅದು ಕೇವಲ ಭ್ರಮೆ ಎಂದು ಪ್ರಿಂಟರ್ಸ್ ಮಾಲೀಕರು ಬಂದ್ಗೆ ಬೆಂಬಲ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರಿಂಟರ್ಸ್ ಅಸೋಸಿಯೇಷನ್ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಮತ್ತು ಕೊಪ್ಪಳ ಜಿಲ್ಲಾ ಮುದ್ರಣ ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲಪ್ಪ ನಿಡಶೇಸಿ ಜಂಟಿ ಹೇಳಿಕೆ ನೀಡಿ, ಕೊಪ್ಪಳ ಮತ್ತು ಭಾಗ್ಯನಗರದಲ್ಲಿರುವ ಎಲ್ಲಾ ಮುದ್ರಣಕಾರರು ಬಂದ್ಗೆ ಬೆಂಬಲ ನೀಡಿದ್ದು, ಫೆ. 22ರಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮೂಲಕ ನಡೆಯುವ ವಿಚಾರ ಸಂಕಿರಣ ಮತ್ತು ಫೆ. 24ರ ಪರಿಸರ ಹಿತರಕ್ಷಣಾ ವೇದಿಕೆಯ ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಬೃಹತ್ ಕೈಗಾರಿಗಳಿಂದಾದ ಪರಿಸರ ಮಾಲಿನ್ಯವಾಗುತ್ತದೆ. ಇಲ್ಲಿನ ಕಾರ್ಖಾನೆಗಳು ಕಳೆದ 20-25 ವರ್ಷಗಳಿಂದ ಇಲ್ಲಿಯೇ ಉದ್ಯೋಗ ಸೃಷ್ಟಿಯ ಹುಸಿ ಭರವಸೆ ನೀಡುತ್ತಿದ್ದು, ಅವರೆಲ್ಲರೂ ಪ್ರಿಂಟಿಂಗ್ ಕೆಲಸಗಳನ್ನು ಸಹ ಬೇರೆ ಜಿಲ್ಲೆಗಳಲ್ಲಿ ಮಾಡಿಸುತ್ತಾರೆ. ನಮ್ಮ ಕೊಪ್ಪಳದ ಪ್ರಿಂಟಿಂಗ್ ಪ್ರೆಸ್ನವರಿಗೆ ಕೆಲಸ ಕೊಟ್ಟಿಲ್ಲ ಎಂದಿದ್ದಾರೆ.