ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಾರ್ಚ್ 1ರಿಂದ 20ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಹಾಗೂ ಪಾರದರ್ಶಕವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅಗತ್ಯವಿರುವ ಗಾಳಿ, ಬೆಳಕು, ನೀರಿನ ವ್ಯವಸ್ಥೆಗಳನ್ನು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಆದ್ಯತೆ ಮೇರೆಗೆ ನೀಡಬೇಕು ಎಂದು ಸೂಚಿಸಿದರು.
ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮ, ಲೋಪ-ದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು, ಮಾರ್ಗಾಧಿಕಾರಿಗಳನ್ನು ಮತ್ತು ತ್ರಿಸದಸ್ಯ ಸಮಿತಿಯನ್ನು ನೇಮಿಸಲಾಗಿದೆ. ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಸೂಚಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ದ್ವಿತೀಯ ಪಿಯುಸಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ಜರುಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ ಮಾತನಾಡಿ, ಮಾರ್ಚ್ 1ರಿಂದ 20ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, 11904 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗಲು ಕ್ರಮ ವಹಿಸಲಾಗಿದೆ ಎಂದರು.
ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ, ಸಿ.ಸಿ ಟಿವಿ ಅಳವಡಿಕೆ, ಸೂಕ್ತ ಬಂದೋಬಸ್ತ್ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಜಿಲ್ಲೆಯಲ್ಲಿನ ಪರೀಕ್ಷಾ ಕೇಂದ್ರಗಳ ವಿವರ
ನಗರದ ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಕಾಲೇಜು, ವಿ.ಡಿ.ಎಸ್ ಬಾಲಕಿಯರ ಪದವಿಪೂರ್ವ ಕಾಲೇಜು, ನಗರಸಭೆ ಪದವಿಪೂರ್ವ ಕಾಲೇಜು, ಎಚ್.ಸಿ.ಇ.ಎಸ್ ಪದವಿಪೂರ್ವ ಕಾಲೇಜು, ಕೆ.ವಿ.ಎಸ್.ಆರ್ ಸಂಯುಕ್ತ ಪದವಿಪೂರ್ವ ಕಾಲೇಜು, ಎ.ಎಸ್.ಎಸ್. ಪದವಿಪೂರ್ವ ಕಾಲೇಜು, ಮೈಲಾರಪ್ಪ ಮೆಣಸಗಿ ಪದವಿಪೂರ್ವ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಗದಗ-ಬೆಟಗೇರಿಯ ಲೋಯಲಾ ಸಂಯುಕ್ತ ಪದವಿಪೂರ್ವ ಕಾಲೇಜು, ಗಜೇಂದ್ರಗಡ ತಾಲೂಕು ನರೇಗಲ್ ಅನ್ನದಾನೇಶ್ವರ ಪದವಿಪೂರ್ವ ಕಾಲೇಜು, ಗಜೇಂದ್ರಗಡದ ಎಸ್.ಎಂ ಭೂಮರೆಡ್ಡಿ ಪದವಿಪೂರ್ವ ಕಾಲೇಜು, ಗಜೇಂದ್ರಗಡದ ಸರಕಾರಿ ಪದವಿಪೂರ್ವ ಕಾಲೇಜು, ನರಗುಂದದ ಲಯನ್ಸ್ ಪದವಿಪೂರ್ವ ಕಾಲೇಜು, ಮುಂಡರಗಿಯ ಜೆ.ಎ. ಪದವಿ ಪೂರ್ವ ಕಾಲೇಜು, ಮುಂಡರಗಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜು, ಶಿರಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜು, ರೋಣದ ಕಿತ್ತೂರು ಚೆನ್ನಮ್ಮ ಪದವಿಪೂರ್ವ, ಲಕ್ಷ್ಮೇಶ್ವರದ ಬಿ.ಸಿ.ಎನ್ ಪದವಿಪೂರ್ವ ಕಾಲೇಜು, ಲಕ್ಷ್ಮೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜು.
ದ್ವಿತೀಯ ಪಿಯುಸಿ ಪರೀಕ್ಷೆ-1ರ ವೇಳಾಪಟ್ಟಿ
ಮಾರ್ಚ್ 1ರಂದು ಕನ್ನಡ, ಅರೇಬಿಕ್ (ಬೆ-10ರಿಂದ ಮಧ್ಯಾಹ್ನ 1ರವರೆಗೆ), ಮಾರ್ಚ್ 3ರಂದು ಗಣಿತ, ಶಿಕ್ಷಣ ಶಾಸ್ತ್ರ, ತರ್ಕ ಶಾಸ್ತ್ರ, ವ್ಯವಹಾರ, ಅಧ್ಯಯನ (ಬೆ-10ರಿಂದ ಮ-1 ರವರೆಗೆ), ಮಾರ್ಚ್ 4ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ (ಬೆ-10ರಿಂದ ಮ-1ರವರೆಗೆ), ಮಾರ್ಚ್ 5ರಂದು ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ (ಬೆ-10ರಿಂದ ಮ-1ರವರೆಗೆ), ಮಾರ್ಚ್ 7ರಂದು ಇತಿಹಾಸ, ಭೌತ ಶಾಸ್ತ್ರ (ಬೆ-10ರಿಂದ ಮ-1ರವರೆಗೆ), ಮಾರ್ಚ್ 10ರಂದು ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ (ಬೆ-10ರಿಂದ ಮ-1ರವರೆಗೆ), ಮಾರ್ಚ್ 12ರಂದು ಮನಃ ಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ (ಬೆ-10ರಿಂದ ಮ-1 ರವರೆಗೆ), ಮಾರ್ಚ್ 13ರಂದು ಅರ್ಥ ಶಾಸ್ತ್ರ (ಬೆ-10ರಿಂದ ಮ-1ರವರೆಗೆ), ಮಾರ್ಚ್ 15ರಂದು ಇಂಗ್ಲೀಷ್ (ಬೆ-10ರಿಂದ ಮ-1 ರವರೆಗೆ), ಮಾರ್ಚ್ 17ರಂದು ಭೂಗೋಳ ಶಾಸ್ತ್ರ (ಬೆ-10ರಿಂದ ಮ-1ರವರೆಗೆ), ಮಾರ್ಚ್ 18ರಂದು ಜೀವ ಶಾಸ್ತ್ರ, ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕವಿಜ್ಞಾನ (ಬೆ-10ರಿಂದ ಮ-1ರವರೆಗೆ), ಮಾರ್ಚ್ 19ರಂದು ಹಿಂದೂಸ್ತಾನಿ, ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೈಲ್ ಅಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ನೆಸ್ (ಬೆ-10ರಿಂದ ಮ-12.15ರವರೆಗೆ), ಮಾರ್ಚ್ 20ರಂದು ಹಿಂದಿ (ಬೆ-10ರಿಂದ ಮ-1ರವರೆಗೆ) ಪರೀಕ್ಷೆಗಳು ಜರುಗಲಿವೆ.